ಮದುವೆಯಾಗಿ 3 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ಮಹಿಳೆಯೊಬ್ಬಳನ್ನು ಕೊಲೆಗೈದ ಘಟನೆ ಕೋಲಾರದ ವಿನಾಯಕ ನಗರದಲ್ಲಿ ನಡೆದಿದೆ. ಮೃತ ಮಹಿಳೆಯ ಸಂಬಂಧಿಕರು ಆಕೆಯ ಪತಿ ಹಾಗೂ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಮಕ್ಕಳಾಗಿಲ್ಲ ಎಂದು ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಮೃತ ಮಹಿಳೆಯನ್ನು ಸೆಹರ್ ಅಂಜುಂ (23) ಎಂದು ಗುರುತಿಸಲಾಗಿದೆ. 3 ವರ್ಷದ ಹಿಂದೆ ಅಪ್ಜಲ್ ಎಂಬಾತ ಆಕೆಯನ್ನು ಮದುವೆಯಾಗಿದ್ದ. ಮಹಿಳೆಯ ಪತಿ ಹಾಗೂ ಅತ್ತೆ ವಿರುದ್ಧ ಕೊಲೆಗೈದು ನೇಣು ಬಿಗಿದ ಆರೋಪ ಕೇಳಿ ಬಂದಿದೆ. ಮೃತ ಮಹಿಳೆಗೆ ಮಕ್ಕಳಾಗಿಲ್ಲ ಎಂದು ವೈದ್ಯರು ಹಾಗೂ ನಾಟಿ ಔಷಧ ಸಹ ಕೊಡಿಸಲಾಗಿದೆ. ಆದರೂ ಮಕ್ಕಳಾಗಿಲ್ಲ ಎಂದು ಕಿರುಕುಳ ನೀಡಲಾಗಿದೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಮೃತ ಮಹಿಳೆ ರ್ಯಾಂಕ್ ಪಡೆದ ವಿದ್ಯಾರ್ಥಿಯಾಗಿದ್ದು, ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದಳು. ಆಕೆಯ ಪತಿ ಅನಕ್ಷರಸ್ಥನಾಗಿದ್ದು, ನಿರುದ್ಯೋಗಿಯಾಗಿದ್ದ. ಇದೇ ಕಾರಣಕ್ಕೆ ಹಣಕ್ಕಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೃತಳ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.