ಇಸ್ಲಮಾಬಾದ್ (ಅ. 30): ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
ಆ ಘಟನೆಯನ್ನು ನೆನಪಿಸಿಕೊಂಡಿರುವ ಪಾಕಿಸ್ತಾನದ ಸಂಸದ ಆ ವೇಳೆ ಭಾರತ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ಹೇಳಿದ್ದಾರೆ. ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದ ಬಳಿಕ ಸಂಸದೀಯ ನಾಯಕರೊಂದಿಗೆ ಸಭೆ ನಡೆಸಲಾಯಿತು.
ಆ ಸಭೆಯಲ್ಲಿ ಪಾಕ್ ವಿದೇಶಾಂಗ ಸಚಿವ ಷಾ ಮೊಹಮದ್ ಖುರೇಷಿ ‘ನಾವು ಅಭಿನಂದನ್ ಅವರನ್ನು ವಶಕ್ಕೆ ಪಡೆದಿರುವುದರಿಂದ ಭಾರತ ನಮ್ಮ ದೇಶದ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ’ ಎಂದು ಹೇಳಿದ್ದರು. ಅಷ್ಟರಲ್ಲಾಗಲೇ ಮಿಲಿಟರಿ ಚೀಫ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು. ಅದಾದ ಬಳಿಕ ಸಭೆಯಲ್ಲಿ ಚರ್ಚೆ ಮಾಡಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ಪಾಕ್ ಸಂಸದ ಅಯಾಸ್ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪಾಕಿಸ್ತಾನದ ಮಿಲಿಟರಿ ಚೀಫ್ ಬಾಜ್ವಾ, ವಿದೇಶಾಂಗ ಸಚಿವ ಖುರೇಷಿ ಸೇರಿದಂತೆ ಸಂಸದೀಯ ನಾಯಕರು, ಅಧಿಕಾರಿಗಳ ಜೊತೆಗೆ ಅಂದು ಸಭೆ ನಡೆಸಲಾಗಿತ್ತು. ನನಗಿನ್ನೂ ನೆನಪಿದೆ, ಆ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಇಮ್ರಾನ್ ಖಾನ್ ಒಪ್ಪಿರಲಿಲ್ಲ. ಆಗ ಸಭೆಗೆ ಮಿಲಿಟರಿ ಚೀಫ್ ಬಾಜ್ವಾ ಬಂದರು. ಆಗ ಅವರ ಕಾಲುಗಳು ನಡುಗುತ್ತಿದ್ದವು, ಮಾತನಾಡಲು ತೊದಲುತ್ತಿದ್ದರು. ಆಗ ವಿದೇಶಾಂಗ ಸಚಿವ ಷಾ ಮೊಹಮದ್ ಖುರೇಷಿ, ನಾವು ಈಗ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ರಾತ್ರಿ 9 ಗಂಟೆಗೆ ಭಾರತ ನಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವುದೇ ಉತ್ತಮ ಎಂದು ಹೇಳಿದ್ದರು ಎಂದು ಸಂಸದ ಅಯಾಜ್ ಸಾಧಿಕ್ ನೆನಪಿಸಿಕೊಂಡಿದ್ದಾರೆ.