

ಲಕ್ನೊ, ಮೇ 1: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಭಾರೀ ದರ ಏರಿಕೆಯನ್ನು ಖಂಡಿಸಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಶುಕ್ರವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.



ಈ ದರ ಏರಿಕೆ ಸಾಮಾನ್ಯ ಜನರ ಆಹಾರ ವೆಚ್ಚವನ್ನು ಹೆಚ್ಚಿಸುವ ಮೂಲಕ ನೇರ ಪರಿಣಾಮ ಬೀರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವಾಗಿ ಜಾಗತಿಕ ಇಂಧನ ದರಗಳಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 993 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ಸತತ ಮೂರನೇ ತಿಂಗಳ ದರ ಏರಿಕೆಯಾಗಿದೆ.ಹೋಟೆಲ್ಗಳು ಮತ್ತು ಉಪಹಾರ ಗೃಹಗಳಲ್ಲಿ ಬಳಸುವ ವಾಣಿಜ್ಯ ಸಿಲಿಂಡರ್ ದರ ದಿಲ್ಲಿಯಲ್ಲಿ ಇದೀಗ ದಾಖಲೆಯ 3,071.5 ರೂ.ಗಳಿಗೆ ಏರಿಕೆಯಾಗಿದೆ. ಇದಕ್ಕೂ ಮೊದಲು ಇದು 2,078.50 ರೂ.ಗಳಷ್ಟಿತ್ತು. ಆದರೆ ಗೃಹ ಬಳಕೆಯ ಎಲ್ಪಿಜಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ಯಾದವ್, “ಸಿಲಿಂಡರ್ ದುಬಾರಿಯಾಗುವುದಿಲ್ಲ; ರೊಟ್ಟಿ-ಥಾಲಿಯ ಬೆಲೆ ದುಬಾರಿಯಾಗುತ್ತದೆ. ಸ್ವತಃ ಹಣ ನೀಡಿ ತಿನ್ನುವವರಿಗೆ ಮಾತ್ರ ಇದರ ಪರಿಣಾಮ ಗೊತ್ತಾಗುತ್ತದೆ; ಇತರರ ಮನೆಗೆ ಹೋಗಿ ತಿನ್ನುವವರಿಗೆ ಅಥವಾ ಇತರರ ತಟ್ಟೆಯಿಂದ ತಿನ್ನುವವರಿಗೆ ಅಲ್ಲ” ಎಂದರು.“ಸಿಲಿಂಡರ್ ದರವನ್ನು ಹೆಚ್ಚಿಸಲೇಬೇಕಾಗಿದ್ದರೆ, ನೇರವಾಗಿ 1,000 ರೂ. ಹೆಚ್ಚಿಸಬಹುದಿತ್ತು. ಆದರೆ 1,000 ರೂ.ಗೆ ಕೇವಲ 7 ರೂ. ಕಡಿಮೆ ಮಾಡಿ ಜನರಿಗೆ ಏನು ಉಪಕಾರ ಮಾಡಿದ್ದೀರಿ?” ಎಂದು ವ್ಯಂಗ್ಯವಾಡಿದರು.ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಕುಂಠಿತತೆ ಕುರಿತು ಸರಕಾರ ಯಾವಾಗ ಖಂಡನಾ ನಿರ್ಣಯ ತರಲಿದೆ ಎಂದು ಅವರು ಪ್ರಶ್ನಿಸಿದರು.
ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಉತ್ತರ ಪ್ರದೇಶ ವಿಧಾನಸಭೆಯ ಎರಡೂ ಸದನಗಳಲ್ಲಿ ಅಂಗೀಕರಿಸಿದ ಖಂಡನಾ ನಿರ್ಣಯವನ್ನು ಕೂಡ ಅವರು ಟೀಕಿಸಿದರು.








