ಪುತ್ತೂರು (ನ.2): ಕಡಬ ತಾಲೂಕಿನ ಕ್ರೀಡಾ ಪಟುವೊಬ್ಬರು ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಾಲೂಕಿನ ಸವಣೂರು ಗ್ರಾಮದ ನಡುಬೈಲು ನಿವಾಸಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ , ರೈಲ್ವೆ ಇಲಾಖೆ ಉದ್ಯೋಗಿ ಅಭಿಷೇಕ್ ಎನ್ ಶೆಟ್ಟಿ ಅವರು ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಡುಬೈಲು ಜಗನ್ನಾಥ ಶೆಟ್ಟಿ ಮತ್ತು ತುಳಸಿನಿ ಶೆಟ್ಟಿ ಅವರ ಪುತ್ರ ಅಭಿಷೇಕ್.
2011ರಲ್ಲಿ 16 ವರ್ಷದ ಹಳೆಯ ಕಿರಿಯರ ರಾಷ್ಟ್ರೀಯ ದಾಖಲೆ, 56 ನೇ ಓಪನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 25 ವರ್ಷದ ಹಳೆಯ ರಾಜ್ಯ ದಾಖಲೆ, 29 ವರ್ಷದ ಕರ್ನಾಟಕ ರಾಜ್ಯ ಹಿರಿಯ ದಾಖಲೆ, 18 ವರ್ಷದ ಹಳೆಯ ಭಾರತೀಯ ರೈಲ್ವೆ ದಾಖಲೆ ಮುರಿದು ನೂತನ ದಾಖಲೆ ಸ್ಥಾಪಿಸಿದ್ದಾರೆ.
2015 ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕೂಟ, ಮಂಗಳೂರಿನಲ್ಲಿ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್, 2017 ರಲ್ಲಿ ಚೆನ್ನೈನಲ್ಲಿ ನಡೆದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್, ಪಟಿಯಾಲದಲ್ಲಿ ಹಿರಿಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.