

ಬೆಂಗಳೂರು: ಅಭಿಮಾನಿಯನ್ನು ಹೊಡೆದ ಆರೋಪದ ಮೇಲೆ ನಟ ಧನ್ವೀರ್ ಹಾಗೂ ಸ್ನೇಹಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಭಿಮಾನಿ ಚಂದ್ರಶೇಖರ್ಗೆ ನಿಂದಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿತ್ತು. ಇದರ ಆಧಾರದಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಫೆ.18ರ ಶುಕ್ರವಾರ ಧನ್ವೀರ್ ಅವರ ‘ಬೈ ಟೂ ಲವ್’ ಚಿತ್ರ ತೆರೆಗೆ ಬಂದಿತ್ತು. ಇದರ ಸಂತಸದಲ್ಲಿದ್ದ ನಟನ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಕುರಿತು ಧನ್ವೀರ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಫೆ.17ರಂದು ಅನುಪಮ ಠಾಕಿಸ್ ಬಳಿ ಘಟನೆ ನಡೆದಿತ್ತು. ಅನುಪಮ ಚಿತ್ರಮಂದಿರದ ಬಳಿ ಚಂದ್ರಶೇಖರ್ ಮತ್ತು ಸ್ನೇಹಿತರು ತೆರಳಿದ್ದರು.
ಧನ್ವೀರ್ ಅವರನ್ನು ನೋಡುತ್ತಿದ್ದಂತೆ ಚಂದ್ರಶೇಖರ್ ಸ್ನೇಹಿತ ಸೆಲ್ಫಿ ಕೇಳಲು ಹೋಗಿದ್ದರು. ಸ್ನೇಹಿತನಿಗೆ ಚಂದ್ರಶೇಖರ್, ‘ಊರಿಗೆ ಹೋಗಲು ತಡವಾಗುತ್ತದೆ, ಬೆಳಗ್ಗೆ ಫೋಟೊ ತೆಗೆಸಿಕೊಳ್ಳುವಂತೆ ಬಾ’ ಎಂದು ಹೇಳಿದ್ದರು. ಆಗ ಧನ್ವೀರ್ ಚಂದ್ರಶೇಖರ್ಗೆ ‘ನೀವು ಕನ್ನಡ ಬೆಳೆಸುವುದಿಲ್ಲ’ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಂದ್ರಶೇಖರ್ ತೆರಳಿದ್ದಾರೆ.
