ಉಡುಪಿ: ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಾಗಲಕೋಟೆ ಮೂಲದ ದಂಪತಿಯ ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಿಸಿದ್ದಾನೆ.
ಮಗುವನ್ನು ಕಿಡ್ನ್ಯಾಪ್ ಮಾಡಿ ಖತರ್ನಾಕ್ ಕಳ್ಳ ಖಾಸಗಿ ಬಸ್ ಹತ್ತುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇರೆಗೆ ಉಡುಪಿ ನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ 2 ವರ್ಷದ ಮಗುವನ್ನು ಅಪಹರಿಸಲಾಗಿದೆ ಎನ್ನಲಾಗಿದೆ. ಈ ದಂಪತಿಗೆ ಇಬ್ಬರು ಮಕ್ಕಳು. ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆಂದು ಉಡುಪಿಗೆ ಬಂದಾಗ ಒಬ್ಬ ಮಗುವನ್ನು ಊರಲ್ಲೇ ಬಿಟ್ಟು ಮತ್ತೋರ್ವನನ್ನು ಕರೆದುಕೊಂಡು ಬಂದಿದ್ದಾರೆ.
ಕೊರೊನಾ ಲಾಕ್ಡೌನ್ ಸಂದರ್ಭದಿಂದಲೂ ಈ ದಂಪತಿ ಕರಾವಳಿ ಬೈಪಾಸ್ ಬಳಿ ಒಂದು ಶೆಡ್ ಹಾಕಿಕೊಂಡು ವಾಸವಾಗಿದ್ದರು. ಇಲ್ಲೇ ತಾನು ಬಾಗಲಕೋಟೆ ಮೂಲದವನೇ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಈ ದಂಪತಿಗೆ ಪರಿಚಯವಾಗಿದ್ದ. ಇಂದು ಬೆಳಿಗ್ಗೆ ಮಗುವಿಗೆ ಕಾಫಿ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋದ ಆಸಾಮಿ ಮತ್ತೆ ವಾಪಸ್ಸು ಬರಲೇ ಇಲ್ಲ ಎನ್ನಲಾಗಿದೆ.
ಸದ್ಯ ಈ ವ್ಯಕ್ತಿ ಮಗುವನ್ನು ಎತ್ತಿಕೊಂಡು ಖಾಸಗಿ ಬಸ್ನಲ್ಲಿ ಪರಾರಿಯಾದ ವಿಡಿಯೋ ಈಗ ಲಭ್ಯವಾಗಿದೆ. ಭಾರತಿ- ಅರುಣ್ ದಂಪತಿ ದೂರಿನ ಆಧಾರದ ಮೇರೆಗೆ ಉಡುಪಿ ನಗರ ಪೊಲೀಸರು ಖತರ್ನಾಕ್ ಮಗು ಕಳ್ಳನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.