
ಮಂಡ್ಯ: ಒಂದೇ ಕುಟುಂಬದ ಐವರನ್ನು ಕೊಂದ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ಲಕ್ಷ್ಮಿ (30) ಎನ್ನಲಾಗಿದೆ.

ಆಂಧ್ರಪ್ರದೇಶದಲ್ಲಿ ವಾಸವಾಗಿದ್ದ ಹಂತಕಿ ಲಕ್ಷ್ಮಿ ಕಳೆದ ಎರಡು ತಿಂಗಳಿನಿಂದ ಮೈಸೂರಿನಲ್ಲಿ ವಾಸವಾಗಿದ್ದಳು. ಈಕೆಗೆ ಕೊಲೆಯಾದ ಮಹಿಳೆಯ ಪತಿ ಗಂಗಾರಾಮ್ ಮೇಲೆ ಪ್ರೇಮಾಂಕುರವಾಗಿತ್ತು.
ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದರೂ ತಂಗಿಯ ಗಂಡನನ್ನು ಪ್ರೀತಿಸುತ್ತಿದ್ದಳು. ಹೆಂಡತಿಗೆ ಈ ವಿಚಾರ ತಿಳಿದ ಬಳಿಕ ಗಂಗಾರಾಮ್ ಅಕ್ರಮ ಸಂಬಂಧ ಬಿಟ್ಪಿದ್ದ. ಆದರೆ ಆರೋಪಿ ಮಹಿಳೆ ಹೆಂಡತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಗಂಗಾರಾಮ್ ಪೀಡಿಸುತ್ತಿದ್ದಳು.

ಗಂಗಾರಾಮ್ ವ್ಯಾಪಾರಕ್ಕೆ ತೆರಳಿದ ಸಂದರ್ಭದಲ್ಲಿ ನಿನ್ನ ಜೊತೆ ಮಾತನಾಡಬೇಕೆಂದು ತಂಗಿಯ ಮನೆಗೆ ರಾತ್ರಿ 9 ಗಂಟೆಗೆ ಬಂದಿದ್ದ ಹಂತಕಿ, ಮಧ್ಯರಾತ್ರಿ ಭೀಕರ ಕೊಲೆ ಮಾಡಿದ್ದಾಳೆ. ತಂಗಿ ಹಾಗೂ ಮಲಗಿದ್ದ ನಾಲ್ವರು ಮಕ್ಕಳನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದಿದ್ದಾಳೆ.
ಮಂಡ್ಯ ಜಿಲ್ಲೆ ಕೆ.ಆರ್.ಎಸ್. ಠಾಣೆ ಪೊಲೀಸರು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಅಳುತ್ತಿದ್ದ ಲಕ್ಷ್ಮಿಯನ್ನು ವಿಚಾರಣೆ ನಡೆಸಿದಾಗ ಗಂಗಾರಾಮ್ ಜೊತೆ ಆಕೆಯ ಪ್ರೀತಿಯ ನಂಟಿನ ಬಗ್ಗೆ ಬಯಲಾಗಿದೆ.
ಪ್ರೀತಿಗಾಗಿಯೇ ಕೃತ್ಯವನ್ನು ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸುಳಿವಿನ ಹಿನ್ನೆಲೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಸತ್ಯ ಬಾಯಿಬಿಟ್ಟಿದ್ದಾಳೆ.









