ಮಂಗಳೂರು : ಬಜ್ಪೆ ಪೊಲೀಸರು ಏಳು ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚರಸ್ ಹಾಗೂ ಕಾರನ್ನು ಜಪ್ತಿ ಮಾಡಿ ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಸೂರಿಂಜೆ ಕಿನ್ನಿಗುಡ್ಡೆ ಹೌಸ್ ನಿವಾಸಿ ಅಬ್ದುಲ್ ಅಝೀಜ್ (34) ಎನ್ನಲಾಗಿದ್ದು, ಅತನಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಚರಸ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದಾದ್ಯಂತ ಮಾದಕ ವ್ಯಸನ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ನೀಡಿದ ಸೂಚನೆಯಂತೆ ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಫ್ಲೆಟ್ ಇಲ್ಲದ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ತಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಅಬ್ದುಲ್ ಅಝೀಜ್ನನ್ನು ವಶಕ್ಕೆ ಪಡೆದು ಕಾರು ಪರಿಶೀಲನೆ ಮಾಡಿದಾಗ 250 ಗ್ರಾಂ ತೂಕದ ಮಾದಕ ವಸ್ತು ಚರಸ್ ಪತ್ತೆಯಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಆರೊಪಿಯ ಪತ್ತೆಗಾಗಿ ಪೊಲೀಸರು ವ್ಯಾಪಕ ಕಾರ್ಯಚರಣೆ ನಡೆಸುತ್ತಿದ್ದಾರೆ. ಬಜಪೆ ಠಾಣಾ ಪಿ.ಐ. ಪ್ರಕಾಶ್ ನೇತೃತ್ವದ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿತ್ತು.