

ಕಲ್ಲಡ್ಕ: ದಿನಾಂಕ 22-12 – 2021 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಗಣಿತ ಸಂಘದಿಂದ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವಾಗಿ ಆಚರಿಸಲಾಯಿತು.

“ವಿಶ್ವದ ಗಣಿತಕ್ಕೆ ಭಾರತದ ಕೊಡುಗೆ ಅಪಾರ. ಸೊನ್ನೆಯನ್ನು ಪ್ರಪಂಚಕ್ಕೆ ನೀಡಿದ ಭಾರತ, ಗಣಿತಕ್ಕೆ ಶ್ರೀನಿವಾಸ ರಾಮಾನುಜನ್ ಅವರನ್ನು ನೀಡಿದೆ. ಕೇವಲ 32 ವರ್ಷಗಳ ಕಾಲ ಬದುಕಿದ್ದ ಶ್ರೀನಿವಾಸರ ಸಾಧನೆ ಜಗತ್ತಿನಲ್ಲಿ ಮನುಕುಲವಿರುವರೆಗೂ ಶಾಶ್ವತ. ಅನೇಕ ಗಣಿತದ ಸಮಸ್ಯೆಗಳನ್ನು ತಮಗೆ ತಾವೇ ಸೃಷ್ಟಿಸಿಕೊಂಡು ಪರಿಹರಿಸುತ್ತಿದ್ದರು. ಗಣಿತವನ್ನು ಕಂಠಪಾಠ ಮಾಡದೆ ಅಭ್ಯಾಸ ಮತ್ತು ಪ್ರಯತ್ನದಿಂದ ದಕ್ಕಿಸಿಕೊಳ್ಳಬೇಕು.

ಪಠ್ಯದಲ್ಲಿ ಬರುವ ಲೆಕ್ಕಕ್ಕೆ ಮಾತ್ರ ಒತ್ತು ಕೊಡದೆ ನಿತ್ಯ ಜೀವನಕ್ಕೂ ಅನ್ವಯಿಕ ಗಣಿತದ ಸಮಸ್ಯೆಗಳನ್ನು ಮಕ್ಕಳಿಗೆ ಅರ್ಥೈಸಿಕೊಡುವುದು ಬಹು ಮುಖ್ಯ. ಪ್ರಾಚೀನ ಭಾರತದ ಶ್ರೇಷ್ಠ ಗಣಿತಜ್ಞರ ಜೀವನ ಹಾಗೂ ಕೊಡುಗೆಗಳನ್ನು ಸಂದರ್ಭಕ್ಕೆ ತಕ್ಕಂತೆ ತಿಳಿಸುವುದು , ಸರಳ ಪ್ರಯೋಗಗಳ ಹಾಗೂ ಪ್ರಾತ್ಯಕ್ಷಿತೆಯ ಮೂಲಕ ಗಣಿತವನ್ನು ಭೋದಿಸಿದಾಗ ಮಾತ್ರ ಮಕ್ಕಳ ಕಲಿಕೆ ಸುಲಭವಾಗಲು ಸಾಧ್ಯ.

ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ, ಪಾರ್ಟಿಷಿಯನ್ ಸಂಖ್ಯೆಗಳ ಬಗ್ಗೆ ರಾಮಾನುಜರ ಊಹೆ ನಿಲುಕೆಗೂ ಅಸಾಧ್ಯವಾದುದು. ” ಎಂದು ಶ್ರೀರಾಮ ಪ್ರೌಢ ಶಾಲೆಯ ಗಣಿತ ಪ್ರಾಧ್ಯಾಪಕರು ಹಾಗೂ ವೇದ ಗಣಿತದ ಸಂಪನ್ಮೂಲ ವ್ಯಕ್ತಿಯಾದ ವಿನುತರವರು ಗಣಿತಶಾಸ್ತ್ರಕ್ಕೆ ರಾಮಾನುಜನ್ ಅವರ ಕೊಡುಗೆಗಳ ಬಗ್ಗೆ ತಿಳಿಸಿಕೊಟ್ಟರು.


ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ , ”ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆ, ಗಣಿತ ವಿಷಯಕ್ಕೆ ಸಂಬಂಧಿಸಿದ ರಂಗೋಲಿ ಸ್ಪರ್ಧೆ, ಗಣಿತ ಆಕೃತಿಗಳ ಸಂಗ್ರಹ ಮತ್ತು ಪ್ರದರ್ಶನ, ಮಣ್ಣಿನಲ್ಲಿ ಗಣಿತ ಮಾದರಿ ರಚನೆ, ಗಣಿತ ಪ್ರಯೋಗಾಲಯದಲ್ಲಿ ಮಾದರಿ ಪದರ್ಶನದೊಂದಿಗೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 6ನೇ ತರಗತಿ ವೈದೇಹಿ ಗಣಿತ ಹಾಡನ್ನು ಹಾಡಿದಳು.

ವೇದಿಕೆಯಲ್ಲಿ ಶ್ರೀರಾಮ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಪ್ರದಾನ ವ್ಯವಸ್ಥಾಪಕರಾದ ಸಂಗೀತ ಸಿ೦ಗೇರಿ ತೋಟ, ಪೋಷಕರಾದ ಮಮತ ಪರ್ಲೊಟ್ಟು , ಗಣಿತ ಅಧ್ಯಾಪಕರಾದ ಪ್ರೀತಾ, ರಮ್ಯ ನಿವೇದಿತಾ , ಜ್ಯೋತಿ ಶ್ರೀ , ಗುಣಶ್ರೀ, ದೇವಿಕಾ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ದಿವ್ಯ ನಿರೂಪಿಸಿದರು.

