ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾರಿಂಜ ದೇವಸ್ಥಾನಕ್ಕೆ ಮಾರಕವಾಗಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಶಾಶ್ವತ ಬೀಗ ಜಡಿಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿದ್ದು, ಅಕ್ರಮ ಗಣಿಗಾರಿಕೆಗೆ ಬೀಗ ಹಾಕಿ ಅಕ್ರಮ ಎಸಗಿದವರ ವಿರುದ್ಧ ಲಕ್ಷಾಂತರ ರೂಪಾಯಿ ದಂಡ ಹಾಕಿದ್ದಾರೆ.
ಪ್ರಭಾವಿಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿಗಳು ಕೈಗೊಂಡ ದಿಟ್ಟ ನಿರ್ಧಾರಕ್ಕೆ ಕ್ಷೇತ್ರದ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ಕಲ್ಲು ಕ್ವಾರಿಯಲ್ಲಿ ಪರವಾನಗಿದಾರ ತನ್ನ ಪರವಾನಗಿಯ ವ್ಯಾಪ್ತಿ ಮೀರಿ ಸುಮಾರು 3.28 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಜಿಲ್ಲಾಡಳಿತದ ತನಿಖೆ ಸಂದರ್ಭದಲ್ಲಿ ಗೊತ್ತಾಗಿದೆ. ಹೀಗಾಗಿ 8,12,87,198 ರೂ. ದಂಡ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಚಿಸಿದ್ದು, ದಂಡ ಪಾವತಿಸದ ಕಾರಣ ಆ ಗಣಿಗಾರಿಕೆಯನ್ನು ಬಂದ್ ಮಾಡಲಾಗಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನ. ಪ್ರಕೃತಿಯ ಮಧ್ಯೆ ಬೃಹದಾದ ಬಂಡೆಯ ಮೇಲೆ ನೆಲೆ ನಿಂತ ಆ ಈಶ್ವರನ ಸನ್ನಿಧಾನಕ್ಕೆ ಕಲ್ಲು ಗಣಿಗಾರಿಕೆಯಿಂದ ಸಂಚಕಾರ ಉಂಟಾಗಿತ್ತು. ಇದೀಗ ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಕ್ರಮವಾಗಿ ನಡೆಯುತ್ತಿದ್ದ ಮೂರು ಗಣಿಗಾರಿಕೆಗಳಿಗೂ ಬೀಗ ಜಡಿದಿದೆ.
ದೇಗುಲದ ನಾಲ್ಕು ಸುತ್ತಲೂ ಕಲ್ಲು ಗಣಿಗಾರಿಕೆಯ ಸ್ಫೋಟದಿಂದ ದೇಗುಲ ಬಿರುಕು ಬಿಟ್ಟಿತ್ತು. ಹೀಗಾಗಿ ಕಾವಳ ಮೂಡೂರು ಗ್ರಾಮ ಮತ್ತು ಕಾವಳ ಪಡೂರು ಗ್ರಾಮಗಳಲ್ಲಿದ್ದ ಈ ಕಲ್ಲು ಗಣಿಗಾರಿಕೆ ವಿರುದ್ದ ಸ್ಥಳೀಯರು, ದೇವಸ್ಥಾನದ ಭಕ್ತಾದಿಗಳು ಬೃಹತ್ ಪ್ರತಿಭಟನೆ, ಹೋರಾಟ ನಡೆಸಿದ್ದರು.
ಸದ್ಯ ದೇವಸ್ಥಾನದ ಆಸುಪಾಸು ಕಾರ್ಯಚರಿಸುತ್ತಿದ್ದ ಮೂರು ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ದೇವಸ್ಥಾನಕ್ಕೆ ಯಾವುದೇ ಧಕ್ಕೆ ಬಾರದ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಎಚ್ಚರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ವಹಿಸಿದೆ.