ಚಿಕ್ಕಮಗಳೂರು: ಕಳೆದ ನಾಲ್ಕೈದು ದಶಕಗಳಿಂದ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರದ ಜೊತೆ ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಮೂಲಕ ವಿವಾದಿತ ಕೇಂದ್ರವೂ ಆಗಿದ್ದ ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದೆ.

ಈ ಆಡಳಿತ ಮಂಡಳಿ ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತಂತೆ ನಿರ್ಧಾರ ಮಾಡುವ ಅಧಿಕಾರ ಈ ಆಡಳಿತ ಮಂಡಳಿಗೆ ಇದೆ. ಈ ಆಡಳಿತ ಮಂಡಳಿಗೆ ಸದಸ್ಯರಾಗಲು 42 ಜನ ಅರ್ಜಿ ಹಾಕಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅರ್ಜಿದಾರರ ಅರ್ಹತೆ, ಅನರ್ಹತೆ, ವಿದ್ಯಾಭ್ಯಾಸ, ವಿಳಾಸ ಸೇರಿದಂತೆ ಎಲ್ಲರ ಮಾಹಿತಿ ಸಂಗ್ರಹಿಸಿತ್ತು.

ಇಂದು ರಾಜ್ಯ ಸರ್ಕಾರ ಎಂಟು ಜನರ ಆಡಳಿತ ಮಂಡಳಿ ಸದಸ್ಯರನ್ನ ನೇಮಕ ಮಾಡಿದೆ. ಇಬ್ಬರು ಮಹಿಳೆಯರು, ಓರ್ವ ಮುಸ್ಲಿಂ ವ್ಯಕ್ತಿ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಈ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ದತ್ತಪೀಠದಲ್ಲಿ ಪೂಜೆ ಹೇಗಿರಬೇಕು? ಅಲ್ಲಿನ ಆಡಳಿತ ವ್ಯವಸ್ಥೆ ಹೇಗಿರಬೇಕು? ಹಿಂದೂ-ಮುಸ್ಲಿಮರು ವಾರದಲ್ಲಿ ಯಾರು ಎಷ್ಟು ದಿನ ಪೂಜೆ ಮಾಡಬೇಕು? ಯಾರು ಮಾಡಬೇಕು ಎಂಬೆಲ್ಲಾ ಅಂಶಗಳ ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸಲಿದೆ.
ಸರ್ಕಾರ ಆಡಳಿತ ಮಂಡಳಿ ನೀಡುವ ಪಟ್ಟಿಗೆ ಅಂಕಿತ ಹಾಕಿದರೆ ದತ್ತಪೀಠದಲ್ಲಿ ಇನ್ನು ಮುಂದೆ ಹಿಂದೂ ಅರ್ಚಕರು ಪೂಜೆ ಮಾಡಲಿದ್ದಾರೆ. ಹಿಂದೂ ಅರ್ಚಕರ ನೇಮಕಕ್ಕೆ ಹಿಂದೂ ಸಂಘಟನೆಗಳ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಲಿದೆ.

ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪಸಮಿತಿ ಕೂಡ ಚಿಕ್ಕಮಗಳೂರಿಗೆ ಭೇಟಿ ನೀಡಿ, ಪೂಜಾ ಪದ್ಧತಿಯ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ದತ್ತಪೀಠದ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದೆ.
ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಹಿಂದೂಗಳ 5 ದಶಕಗಳ ಹೋರಾಟಕ್ಕೆ ಸಂದ ಐತಿಹಾಸಿಕ ಜಯ. ಹಿಂದೂಗಳ ಪವಿತ್ರ ಕ್ಷೇತ್ರ ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ ಮಾಡಲಾಗಿದೆ. ಧನ್ಯವಾದಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶ್ರೀ ಗುರು ದತ್ತಾತ್ರೇಯರ ಪುಣ್ಯಸ್ಥಳದ ರಕ್ಷಣೆಗಾಗಿ ದಶಕಗಳಿಂದ ಹೋರಾಟಕ್ಕೆ ಕೈಜೋಡಿಸಿದ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ, ಭಕ್ತಾದಿಗಳಿಗೆ ಶತ ಶತ ನಮನಗಳು ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.








