ವಿಟ್ಲ: ಭಜನೋತ್ಸವ ಸಮಿತಿ ವಿಟ್ಲ, ಶ್ರೀಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್-ವಿಟ್ಲ ಸೀಮೆ ಮತ್ತು ಆರ್.ಕೆ.ಕುಣಿತ ಭಜನಾ ತಂಡ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಕನಕ ಜಯಂತಿಯಂದು ಲೋಕಕಲ್ಯಾಣಾರ್ಥವಾಗಿ ಮತ್ತು ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಭಜನೋತ್ಸವ ಹಾಗೂ ಶ್ರೀಪಂಚಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಕಾರ್ಯಕ್ರಮವು ನ.11 ರಂದು ಶುಕ್ರವಾರ ಮುಂಜಾನೆ ೬ರಿಂದ ಸಂಜೆ 6ರ ತನಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 6ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಭಜನಾರಂಭಗೊಳ್ಳಲಿದೆ. ಉದ್ಯಮಿ ರಾಧಾಕೃಷ್ಣ ನಾಯಕ್ ವಿಟ್ಲ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಬಳಿಕ ಶತರುದ್ರಾಭಿಷೇಕ ಪ್ರಾರಂಭಗೊಂಡು ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ಪ್ರಸಾದ ಭೋಜನ ನಡೆಯಲಿದೆ. ಸಂಜೆ ೩.೩೦ಕ್ಕೆ ಶ್ರೀ ಮಹಮ್ಮಾಯಿ ಕ್ಷೇತ್ರ ಮೇಗಿನಪೇಟೆಯಿಂದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಭಜನಾ ಸಂಕೀರ್ತನಾ ಮೆರವಣಿಗೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮುಂದುವರೆಯಲಿದೆ.
ಸಂಜೆ ಗಂಟೆ ೫ಕ್ಕೆ ಭಜನಾ ಮಂಗಲೋತ್ಸವ ನಡೆಯಲಿದ್ದು ಕಾಸರಗೋಡು ತೋಟಕಾಚರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳರವರು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.