



ಹಾಸನ: ನಾಲ್ಕು ವರ್ಷಗಳ ಕಾಲ ಪ್ರೀತಿಸುತ್ತಿದ್ದವಳು ಮೋಸ ಮಾಡುತ್ತಿದ್ದಾಳೆ ಎಂದು ಮನನೊಂದ ಹಾಸನದ ಯುವಕನೊಬ್ಬ ಚೆನ್ನೈನ ಲಾಡ್ಜ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್ (26) ಮೃತ ದುರ್ದೈವಿ.

ಕಾರ್ತಿಕ್ ಕಳೆದ ನಾಲ್ಕು ವರ್ಷಗಳಿಂದ ಹೊಳೆನರಸೀಪುರ ತಾಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಕಳೆದ ಜನವರಿ 27ರಂದು ಯುವತಿ ತಾನು ಚೆನ್ನೈನಲ್ಲಿದ್ದು, ಅಲ್ಲಿಗೇ ಬರುವಂತೆ ಕರೆದಿದ್ದಳಂತೆ. ಆಕೆಯ ಮಾತು ನಂಬಿ ಕಾರ್ತಿಕ್ ಚೆನ್ನೈಗೆ ಹೋಗಿದ್ದನಂತೆ. ಇತ್ತ ಚೆನ್ನೈಗೆ ಹೋದ ಬಳಿಕ ತಾನು ಹಾಸನದಲ್ಲಿಯೇ ಇರುವುದಾಗಿ ಹೇಳಿದ್ದಾಳಂತೆ. ಯುವತಿ ತನಗೆ ಮೋಸ ಮಾಡಿದ್ದಾಳೆಂದು ಮನನೊಂದು ಕಾರ್ತಿಕ್ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡಿದ್ದಾನೆ.
ಇದೇ ರೀತಿ ಹಲವು ಬಾರಿ ಯುವತಿಯು ಕಾರ್ತೀಕನನ್ನು ಯಾಮಾರಿಸಿದ್ದು ಇದರಿಂದ ಆತ ಮನನೊಂದು ಹೋಗಿದ್ದು ನಂತರ ಚೆನೈನಲ್ಲಿ ತಂಗಲು ರೂಮ್ಮಾಡಿದ್ದ ಲಾಡ್ಜ್ನಲ್ಲಿಯೇ ಯುವಕ ನೇಣಿಗೆ ಶರಣಾಗಿದ್ದಾನೆ.

ಕಾರ್ತಿಕ್ ಹಾಸನದ ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ. ಚೆನ್ನೈನ ಆರಂಬಾಕ್ಕಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಾಸನಕ್ಕೆ ಮಂಗಳವಾರ ಮೃತದೇಹವನ್ನು ತರಲಾಗಿದೆ. ಮಗನ ಅಗಲಿಕೆಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯುವತಿ ನಂಬಿಸಿ ಮೋಸ ಮಾಡಿದ್ದಾಳೆ ಎಂದು ಯುವಕನ ಕುಟುಂಬ ಸದಸ್ಯರ ಆರೋಪಿಸಿದ್ದಾರೆ. ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.