

ಪುತ್ತೂರು: ಕಬಕ ಸಮೀಪದ ಮಿತ್ತೂರಿನಲ್ಲಿ ರೈಲು ಬಡಿದು ಕೊಯಿಲದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ಪುಣಿಕೆತ್ತಡಿ ನಿವಾಸಿ ಜಗದೀಶ ಹಾಗೂ ಹೇಮಾವತಿ ದಂಪತಿ ಪುತ್ರ ಕಾರ್ತಿಕ್ (24ವ.) ಮೃತಪಟ್ಟ ದುರ್ದೈವಿ ಯುವಕ.
ಇವರು ಮಿತ್ತೂರಿನ ಕಿರುಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮುಂಭಾಗದಿಂದ ಬರುತ್ತಿದ್ದ ರೈಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆಎಂದು ವರದಿಯಾಗಿದೆ. ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ಕಾರ್ತಿಕ್ ಕೆಲ ವರ್ಷದ ಹಿಂದೆ ಊರಿಗೆ ಬಂದು ಮೇಸ್ತ್ರಿ ಕೆಲಸ ಮಾಡುತ್ತಿದ್ದರು.

ಮೂರು ದಿನಗಳ ಹಿಂದೆ ಮಂಗಳೂರಿಗೆ ಕೆಲಸಕ್ಕೆ ಬಂದಿದ್ದ ಅವರು ಮೇ 15ರಂದು ರಾತ್ರಿ ಸುಮಾರು 9.30ಕ್ಕೆ ಮನೆಗೆ ಫೋನ್ ಮಾಡಿದ್ದರು. ಬಸ್ ಸಿಗದ ಹಿನ್ನೆಲೆಯಲ್ಲಿ ಮಿತ್ತೂರಿನಲ್ಲಿ ಸೇತುವೆ ಮೂಲಕ ಉಪ್ಪಿನಂಗಡಿ ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ. ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕಾರ್ತಿಕ್ ರವರು ತಂದೆ ಜಗದೀಶ, ತಾಯಿ ಹೇಮಾವತಿ, ಸಹೋದರರಾದ ಕೌಶಿಕ್, ತೃಶಿಕ್ ರನ್ನು ಅಗಲಿದ್ದಾರೆ.











