ಬುರ್ಖಾ ಧರಿಸಲಿಲ್ಲ ಎಂಬ ಕಾರಣಕ್ಕೆ ಮುಂಬೈನಲ್ಲಿ ಇಕ್ಬಾಲ್ ಶೇಖ್ (36) ಎಂಬಾತ ಪತ್ನಿ ರುಪಾಲಿ (20)ಯ ಗಂಟಲನ್ನು ಸೀಳಿ ಹತ್ಯೆ ಮಾಡಿದ್ದಾನೆ. ಮಗ ಯಾರ ಜತೆಗೆ ಇರಬೇಕು ಹಾಗೂ ಮುಸ್ಲಿಂ ಸಮುದಾಯದ ನಿಯಮಗಳ ಪಾಲನೆ ವಿಚಾರವಾಗಿ ದಂಪತಿ ನಡುವೆ ಜಗಳ ಶುರುವಾಗಿತ್ತು. ಅಂತಿಮವಾಗಿ ಇಕ್ಬಾಲ್ ಶೇಖ್ ಪತ್ನಿಯನ್ನು ಕೊಲೆಗೈದಿದ್ದಾನೆ. ಟ್ಯಾಕ್ಸಿ ಡ್ರೈವರ್ ಆಗಿರುವ ಇಕ್ಬಾಲ್ ಮತ್ತು ಹಿಂದೂ ಸಮುದಾಯಕ್ಕೆ ಸೇರಿದ ರುಪಾಲಿ ಅವರ ವಿವಾಹ 2019ರಲ್ಲಿ ನಡೆದಿತ್ತು. ನಂತರ ಆಕೆ, ಹೆಸರನ್ನು ಜಾರಾ ಎಂದು ಬದಲಿಸಿಕೊಂಡಿದ್ದಳು. ಕೆಲವು ಸಮಯದಿಂದ ಇಕ್ಬಾಲ್ನ ಕುಟುಂಬ ಬುರ್ಖಾ ಧರಿಸಲು ಒತ್ತಡ ಹೇರುತ್ತಿತ್ತು. ಈಗ ಅದು ಆಕೆಯ ಕೊಲೆಯಲ್ಲಿ ಅಂತ್ಯವಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಪತಿ ಇಕ್ಬಾಲ್ ಶೇಖ್ ಸೋಮವಾರ ರಾತ್ರಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಮುಂಬೈನ ಚೆಂಬೂರ್ನಲ್ಲಿ ಈ ಘಟನೆ ನಡೆಸಿದೆ. ಆರೋಪಿ ಇಕ್ಬಾಲ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪ್ರತಿದಿನ ಚಿತ್ರಹಿಂಸೆ: 6 ತಿಂಗಳಿಂದ ಬೇರೆ ಬೇರೆ ವಾಸ: ಕುತ್ತಿಗೆಗೆ ಚಾಕು ಇರಿತ…
ರೂಪಾಲಿ, ಇಕ್ಬಾಲ್ನೊಂದಿಗೆ ಅಂತರ್ಧರ್ಮೀಯ ವಿವಾಹವಾಗಿದ್ದಳು, ಆದರೆ ಅವಳು ಇಕ್ಬಾಲ್ನ ಬಲವಂತದಿಂದ ಬೇಸತ್ತು ಕೆಲ ತಿಂಗಳಿನಿಂದ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿದ್ದಳು. ವಿಚ್ಛೇದನಕ್ಕೂ ಮುನ್ನವೇ ಆರೋಪಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಇಕ್ಬಾಲ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರೂಪಾಲಿ ಹಾಗೂ ಇಕ್ಬಾಲ್ ಶೇಖ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಅದಾದ ಬಳಿಕ, ರೂಪಾಲಿ ಚೆಂಬೂರ್ ಪ್ರದೇಶದಲ್ಲಿದ್ದ ಇಕ್ಬಾಲ್ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು.
ರೂಪಾಲಿ ಹಿಂದು ಆಗಿದ್ದ ಕಾರಣಕ್ಕೆ ಮದುವೆಯ ನಂತರ ಮುಸ್ಲಿಂ ಸಂಪ್ರದಾಯವನ್ನು ಅನುಕರಣೆ ಮಾಡುತ್ತಿರಲಿಲ್ಲ. ಇದಕ್ಕಾಗಿ ಇಕ್ಬಾಲ್ ಹಾಗೂ ಅವರ ಕುಟುಂಬ ರೂಪಾಲಿಗೆ ಪ್ರತಿ ದಿನವೂ ಚಿತ್ರಹಿಂಸೆ ನೀಡುತ್ತಿದ್ದರು. ಅದಲ್ಲದೆ, ರೂಪಾಲಿಗೆ ಬುರ್ಖಾ ಧರಿಸುವಂತೆ ಇಕ್ಬಾಲ್ ಹಾಗೂ ಆತನ ಕುಟುಂಬ ಪ್ರತಿನಿತ್ಯ ಒತ್ತಾಯ ಮಾಡುತ್ತಿತ್ತು. ಆದರೆ, ರೂಪಾಲಿ ಮಾತ್ರ ಇದಕ್ಕೆ ವಿರೋಧಿಸಿದ್ದರು. ಈ ಕುರಿತಾಗಿಯೇ ಅವರಿಬ್ಬರ ನಡುವೆ ಅಸಮಾಧಾನ ತಲೆದೋರಿತ್ತು. ಇದಾದ ನಂತರ ರೂಪಾಲಿ ಮತ್ತು ಇಕ್ಬಾಲ್ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಕಳೆದ ಆರು ತಿಂಗಳಿನಿಂದ ಇಬ್ಬರೂ ಬೇರೆ ಬೇರೆ ವಾಸ ಮಾಡುತ್ತಿದ್ದರೂ, ಫೋನ್ನಲ್ಲಿ ಮಾತ್ರ ಮಾತನಾಡುವುದು ನಡೆಯುತ್ತಿತ್ತು. ಆದರೆ, ಈ ಸಮಯದಲ್ಲಿಯೂ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುವಂತೆ ಇಕ್ಬಾಲ್ ಅವರಿಗೆ ಒತ್ತಡ ಹೇರುತ್ತಿದ್ದರು. ರೂಪಾಲಿ, ಇಕ್ಬಾಲ್ ಅವರ ಎರಡನೇ ಪತ್ನಿ. ಮೊದಲ ಪತ್ನಿಗೆ ಮಕ್ಕಳಿಲ್ಲದ ಕಾರಣ ಆಕೆಗೆ ವಿಚ್ಛೇದನ ನೀಡಿದ್ದರು.
ಆರೋಪಿ ಇಕ್ಬಾಲ್ ಶೇಖ್ ಸೋಮವಾರ ಸಂಜೆ ಚೆಂಬೂರ್ ಪ್ರದೇಶದ ಪಿಎಲ್ ಲೋಖಂಡೆ ಮಾರ್ಗದಲ್ಲಿರುವ ನಾಗೇವಾಡಿಯಲ್ಲಿ ತನ್ನನ್ನು ಭೇಟಿಯಾಗಲು ರೂಪಾಲಿಗೆ ಕರೆ ಮಾಡಿದ್ದ. ಈ ವೇಳೆ ಬುರ್ಖಾ ಮತ್ತಿತರ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದೆ. ಈ ಬಗ್ಗೆ ರೂಪಾಲಿ ವಿಚ್ಛೇದನದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ವಾಗ್ವಾದ ಮತ್ತು ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಇಕ್ಬಾಲ್ ತನ್ನ ಜೇಬಿನಿಂದ ಚಾಕು ತೆಗೆದು ರೂಪಾಲಿ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ರೂಪಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.