ಬೆಳ್ತಂಗಡಿ: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವಿರಾರು ರೂ. ನಷ್ಟವಾಗಿದ್ದು, ದನ-ಕರುಗಳು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪಿಲತ್ತಡ್ಕದಲ್ಲಿ ನಡೆದಿದೆ.
ಪೂವಪ್ಪ ಪೂಜಾರಿ ಅವರ ಪುತ್ರ ಸುರೇಶ ಹೈನುಗಾರರಾಗಿದ್ದು, ದನಗಳನ್ನು ಸಾಕುತ್ತಿದ್ದರು. ಒಟ್ಟು ಹಾಲು ಕರೆಯುವ ಐದು ದನ ಹಾಗೂ ಇವುಗಳ ಐದು ಕರುಗಳಿರುವ ಹಟ್ಟಿಗೆ ಬೆಂಕಿ ತಗಲಿದ್ದು, ಬೈ ಹುಲ್ಲು, ಹಿಂಡಿ ಇನ್ನಿತರ ಸಾಮಗ್ರಿಗಳು ಸುಟ್ಟು ಹೋಗಿವೆ.
ಮನೆಮಂದಿ ಹಟ್ಟಿಗೆ ಸೊಪ್ಪು, ಹುಲ್ಲು ಇತ್ಯಾದಿಗಳನ್ನು ತರಲು ಹೊರಗಡೆ ಹೋಗಿದ್ದರು. ಈ ವೇಳೆ ದನದ ಕೊಟ್ಟಿಗೆಗೆ ಬೆಂಕಿ ತಗಲಿತ್ತು. ಈ ಸಮಯ ಪಕ್ಕದ ಮನೆಯವರಿಗೆ ಹಟ್ಟಿಯಿಂದ ಹೊಗೆ ಕಂಡುಬಂದಿದ್ದು ಅಷ್ಟರದ್ದಾಗಲೇ ಬೆಂಕಿ ಹಟ್ಟಿಯನ್ನು ವ್ಯಾಪಿಸತೊಡಗಿತ್ತು. ಈ ಸಮಯ ದನಕರುಗಳನ್ನು ಕಟ್ಟಿ ಹಾಕಿದ್ದ ಹಗ್ಗಗಳನ್ನು ತುಂಡರಿಸಿ ಹೊರಗೆ ಬಿಡಲಾಯಿತು. ಆದರೂ, ಬೆಂಕಿಯು ವ್ಯಾಪಿಸಿ ದನ ಕರುಗಳಿಗೆ ಗಾಯಗಳಾಗಿವೆ. ಹಟ್ಟಿಯ ಸಮೀಪವೇ ಇರುವ ಮನೆಗೆ ಬೆಂಕಿಯಿಂದ ಅನಾಹುತ ಉಂಟಾಗದಂತೆ ಸ್ಥಳೀಯರು ಮುನ್ನೆಚ್ಚರಿಕೆ ಕೈಗೊಂಡಿದ್ದರು.
ಸ್ಥಳಕ್ಕೆ ಪಶು ವೈದ್ಯ ಪರೀಕ್ಷಕ ಮುಂಡಾಜೆಯ ಗಂಗಾಧರ ಸ್ವಾಮಿ ಆಗಮಿಸಿ ಗಾಯಗೊಂಡ ದನ ಕರುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದ್ದು, ಪರಿಶೀಲನೆಯ ಬಳಿಕವಷ್ಟೇ ನಷ್ಟದ ಸ್ಪಷ್ಟ ಮಾಹಿತಿ ತಿಳಿಯಬೇಕಿದೆ.