

ಮಂಗಳೂರು: ಕೂಳೂರು ಮತ್ತು ಕೋಡಿಕಲ್ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ನಾಗನ ಕಲ್ಲಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ 8 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕಾವೂರಿನ ಸಫ್ವಾನ್, ಸುಹೈಬ್, ಪ್ರವೀಣ್ ಅನಿಲ್ ಮೊಂತೇರೊ, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಶಾದ್ ಎನ್ನಲಾಗಿದೆ.

ಘಟನೆಯ ವಿವರ: ಮಂಗಳೂರು ನಗರದ ಕೋಡಿಕಲ್ ಅ.23ರಂದು ಮತ್ತು ಕುಳೂರಿನಲ್ಲಿ ನ.13ರಂದು ನಾಗನ ಕಲ್ಲಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು, ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೃತ್ಯವಾಗಿದ್ದು ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿತ್ತು.


ಸರಗಳ್ಳತನ, ಕಳವು ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ನಗರ ಪೊಲೀಸರು ಕೆಲದಿನಗಳಿಂದ ನಾನಾಕಡೆ ನಾಕಾಬಂಧಿ ಹಾಕಿ ತಪಾಸಣೆ ಬಿಗುಗೊಳಿಸಿದ್ದು, ಇದರಿಂದ ಅಕ್ರಮ ದಂಧೆಯಲ್ಲಿ ತೊಡಗಿಕೊಂಡ ಈ ಆರೋಪಿಗಳಿಗೆ ತೊಂದರೆಯಾಗಿದೆ.
ಹಾಗಾಗಿ ಪೊಲೀಸರ ಗಮನ ಬೇರೆಡೆ ಸೆಳೆಯಲು ನಾಗನ ಕಲ್ಲಿಗೆ ಹಾನಿ ಮಾಡಿ ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿದ್ದಾರೆಂದು ತಿಳಿದು ಬಂದಿದೆ. ವಶಕ್ಕೆ ಪಡೆದ ಆರೋಪಿಗಳೆಲ್ಲರೂ ಗಾಂಜಾ ಮಾರಾಟ, ವ್ಯಸನದಲ್ಲಿ ನಿರತರಾಗಿರುವ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ವಿವರ ಆರೋಪಿಗಳ ಬಂಧನದ ಬಳಿಕವಷ್ಟೇ ತಿಳಿದುಬರಬೇಕಿದೆ.











