ಸುರತ್ಕಲ್: ಕಲಿಕೆಯಲ್ಲಿ ಹಿಂದಿದ್ದ ಬಾಲಕನೊಬ್ಬ, ಮದರಸದಿಂದ ಹಿಂತಿರುಗುವ ವೇಳೆ ತನ್ನ ಮೇಲೆ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದರು ಎಂಬ ಸುಳ್ಳು ಆರೋಪದಿಂದ ಎಲ್ಲರು ಬೇಸ್ತು ಬಿದ್ದ ಘಟನೆ ನಡೆದಿದ್ದು, ಈ ಪ್ರಕರಣ ಪೊಲೀಸ್ ತನಿಖೆ ವೇಳೆ ನಿಜಾಂಶ ಸಾಬೀತಾಗಿದೆ.
ಕಾಟಿಪಳ್ಳ ನಿವಾಸಿಯೋರ್ವರ ಪುತ್ರ, 6ನೇ ತರಗತಿ ಬಾಲಕ ಸಂಜೆ ಮದ್ರಸದ ಪಾಠ ಮುಗಿಸಿ ಮನೆಗೆ ಹೋಗುವ ಸಂದರ್ಭ ಹಲ್ಲೆ ನಡೆದಿದೆ ಎಂದು ಹುಡುಗ ಹಾಗೂ ಆತನ ಕುಟುಂಬಸ್ಥರು ದೂರು ನೀಡಿದ್ದರು. ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಆದರೆ, ಬಾಲಕ ಪೆನ್ನು ಬಳಸಿ ಶರ್ಟ್ ಹರಿದು ಹಾಕಿದ್ದು, ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಾಬೀತಾಗಿದೆ.
ಘಟನೆ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, “ನಾವು ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ತ್ವರಿತವಾಗಿ ಕೈಗೆತ್ತಿಕೊಂಡು ಮತ್ತು ಸಾಂದರ್ಭಿಕ ಸಾಕ್ಷಿಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು. ಇದೇ ವೇಳೆ ನಾನು ಮತ್ತು ನನ್ನ ತಂಡ ಮಕ್ಕಳ ಕಲ್ಯಾಣ ಸಮಿತಿ ಪ್ರತಿನಿಧಿಗಳು ಮತ್ತು ವೈದ್ಯರ ಸಮ್ಮುಖದಲ್ಲಿ ಬಾಲಕನೊಂದಿಗೆ ಸಂವಾದ ನಡೆಸಿದೆವು.
ವಾಸ್ತವವಾಗಿ, ಹುಡುಗ ಕಲಿಕೆಯಲ್ಲಿ ಹಿನ್ನಡೆಯಿದ್ದು, ಶಾಲೆಯಲ್ಲಿ ಆತ್ಮೀಯ ಸ್ನೇಹಿತರಿಲ್ಲ ಎಂಬ ಭಾವನೆ ಇದೆ. ಮನೆಯಲ್ಲಿ ಬಡತನವಿದ್ದು ಈ ಎಲ್ಲಾ ಕಿರಿಕಿರಿಯಿಂದ ನೊಂದಿದ್ದ ಬಾಲಕ ಪೆನ್ನಿನಿಂದ ಶರ್ಟ್ ಹರಿದುಕೊಂಡು ಈ ರೀತಿಯ ಕಥೆ ಕಟ್ಟಿದ್ದ ಎಂದು ಸಾಬೀತಾಗಿದೆ. ಬಾಲಕ ಧಾರ್ಮಿಕ ಅಧ್ಯಯನ ನಡೆಸುತ್ತಿದ್ದ ಮದರಸಾದ ಧಾರ್ಮಿಕ ಮುಖಂಡರು ಮತ್ತು ಆಡಳಿತ ಮಂಡಳಿಗೆ ಪ್ರಕರಣದ ಬಗ್ಗೆ ಮನವರಿಕೆ ಮಾಡಿದ್ದೇವೆ. ಈ ಘಟನೆಯು ಕೋಮು ಉದ್ವಿಗ್ನತೆಗೆ ಕಾರಣವಾಗುವ ದ್ವೇಷದ ಸಂದೇಶಗಳನ್ನು ಹರಡಲು ಕಾರಣವಾಗಿರುವುದರಿಂದ ನಾವು ಅವುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ”.