ಮದುವೆ ದಿನ ಕಾರಿನಲ್ಲಿ ವರನೊಂದಿಗೆ ಹೋಗುತ್ತಿದ್ದ ವಧು ಅರ್ಧ ದಾರಿಯಲ್ಲೇ ಪರಾರಿಯಾದ ಘಟನೆ ಛತ್ತೀಸ್ಗಢದ ಬಸ್ತಾರ್ ಎಂಬ ನಗರದಲ್ಲಿ ನಡೆದಿದೆ.
ದಾಂತೇವಾಡ ನಿವಾಸಿ ಆರತಿ ಸಹರಾ ಹಾಗೂ ಮಹಾರಾಷ್ಟ್ರದ ಸನ್ವರ್ಗಾಂವ್ನ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು. ಇಬ್ಬರ ಕುಟುಂಬ ನಿರ್ಧರಿಸಿದಂತೆ ಬಲೋದ್ ಜಿಲ್ಲೆಯದಲ್ಲಿ ರಾಜರಾದಲ್ಲಿ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಅದರಂತೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದವು. ಅಲ್ಲಿನ ಸಂಪ್ರದಾಯದಂತೆ ಮದುವೆ ಗದ್ದಲವನ್ನೆಲ್ಲಾ ಮುಗಿಸಿ ವಧುವನ್ನು ಕರೆದುಕೊಂಡು ವರನು ಹಾಗೂ ಅವರ ಕುಟುಂಬಸ್ಥರು ತಮ್ಮ ಮನೆಗೆ ತೆರಳಿದ್ದರು. ಇತ್ತ ಆರತಿಯ ಕುಟುಂಬಸ್ಥರು ಕೂಡ ನವ ದಂಪತಿಗಳನ್ನು ಅದ್ಧೂರಿಯಾಗಿ ಬೀಳ್ಕೊಟ್ಟಿದ್ದರು.
ಕಾರು ರಾಜ್ನಂದಗಾಂವ್ನ ಮನ್ಪುರ ಬಳಿ ತಲುಪಿದಾಗ, ಮದುಮಗಳು ಶೌಚಾಲಯ ಹೋಗಬೇಕೆಂದು ಸಬೂಬು ಹೇಳಿ ಕಾರಿನಿಂದ ಕೆಳಗಿಳಿದಿದ್ದಾಳೆ. ಇತ್ತ ಸಾರ್ವಜನಿಕ ಶೌಚಾಲಯದ ಬಳಿ ವರನ ಕಡೆಯರು ಎಷ್ಟು ಹೊತ್ತು ಕಾದರೂ ಮದುಮಗಳು ಮಾತ್ರ ಬಂದಿರಲಿಲ್ಲ. ಆ ಬಳಿಕ ಶೌಚಾಲಯದ ಸುತ್ತ ಮುತ್ತ ಹುಡುಕಾಡಿದಾಗ ವಧು ಎಸ್ಕೇಪ್ ಆಗಿರುವುದು ತಿಳಿದು ಬಂದಿದೆ. ಅದರಂತೆ ವರನ ಕಡೆಯವರು ಕಂಕೇರ್ನ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶೀಘ್ರದಲ್ಲೇ ಕಾರ್ಯಪ್ರವೃತರಾದ ಪೊಲೀಸರಿಗೆ ವಧು ತನ್ನ ಪ್ರಿಯಕರನೊಂದಿಗೆ ಪಕ್ಕದ ಊರಾದ ಮನ್ಪುರದಲ್ಲಿ ಸಿಕ್ಕಿಬಿದ್ದಿದ್ದಾಳೆ. ಪೊಲೀಸರು ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಆರತಿ ಅದಾಗಲೇ ಬಸ್ತಾರ್ ನಿವಾಸಿ ವಿಕಾಸ್ ಗುಪ್ತಾ ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಇಬ್ಬರ ಮದುವೆಗೆ ಕುಟುಂಬಸ್ಥರು ಸಿದ್ಧರಿರಲಿಲ್ಲ. ಹೀಗಾಗಿ ವರನ ಮನೆಗೆ ಹೋಗುವ ದಾರಿಯಲ್ಲಿ ಓಡಿಹೋಗಲು ಪ್ಲ್ಯಾನ್ ರೂಪಿಸಿದ್ದರು.
ಅದರಂತೆ ಹೋಗುತ್ತಿದ್ದ ದಾರಿಯ ಲೈವ್ ಲೊಕೇಶನ್ಗಳನ್ನು ಆರತಿ ತನ್ನ ಪ್ರಿಯಕರ ವಿಕಾಸ್ಗೆ ವಾಟ್ಸಾಪ್ನಲ್ಲಿ ಕಳುಹಿಸಿದ್ದಳು. ಅಲ್ಲದೆ ಒಂದು ಶೌಚಾಲಯದ ಜಾಗವನ್ನು ಫೈನಲ್ ಮಾಡಿ, ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಕಾರಿನಿಂದ ಇಳಿದು ಓಡಿ ಹೋಗಿದ್ದಾಳೆ. ಇದೀಗ ಆರತಿ-ವಿಕಾಸ್ ನಮಗೆ ಹೊಸ ಜೀವನ ಆರಂಭಿಸಲು ಅವಕಾಶ ನೀಡಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ.