ಮಂಗಳೂರು : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪೈಕಿ ಪ್ರಭಾವಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೀಡು ಮಾಡಿದೆ.
ತಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತ ನಾಗಿದ್ದೇನೆ ಮತ್ತು ಅವರ ಸೂಚನೆಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಅವರು ತಮ್ಮ ನಿವೃತ್ತಿಯ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಜನವರಿ 10, 11 ಹಾಗೂ 13ರಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದೆ. ಈ ಪ್ರಭಾವಿ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕೂಡ ಸ್ಪರ್ಧೆ ನಡೆಸಿದ್ದರು.
ಇದೀಗ ತಾವು ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ನಿವೃತ್ತಿಯಾಗಿದ್ದು, ಎಲ್ಲರೂ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ಧಾರೆ.
ಮಿಥುನ್ ಹಿಂದೆ ಸರಿದ್ದಿದ್ದೇಕೆ?
ಯೂತ್ ಕಾಂಗ್ರೆಸ್ ಎಲೆಕ್ಷನ್ನಿಂದ ಹಿಂದೆ ಸರಿದ ಮಿಥುನ್ ರೈಗೆ ಚುನಾವಣಾ ಅಖಾಡದಿಂದ ತೆರಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಮಿಥುನ್ ರೈ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಚುನಾವಣೆ ನಡೆಸುವಂತೆ ಉಳಿದ ಮೂವರು ಪಟ್ಟು ಹಿಡಿದಿದ್ದು ರೈಗೆ ಇದಕ್ಕೆ ಪರ್ಯಾಯವಾದ ಸೂಕ್ತ ಸ್ಥಾನಮಾನ ಕೊಡುವ ಭರವಸೆಯನ್ನ ಡಿ.ಕೆ ಶಿವಕುಮಾರ್ ನೀಡಿದ್ದಾರೆ. ಅವರ ಮಾತಿಗೆ ಒಪ್ಪಿಗೆ ನೀಡಿರುವ ರೈ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ.
ಇದಷ್ಟೇ ಅಲ್ಲದೇ ಮಂಗಳೂರು ಭಾಗದ ಕಾಂಗ್ರೆಸ್ ನಾಯಕರಿಂದಲೂ ರೈ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿತ್ತು. ಈ ಹಿಂದಿನಿಂದಲೂ ಕರಾವಳಿ ಕೈ ನಾಯಕರು ಮಿಥುನ್ ರೈ ಸ್ಪರ್ಧೆಯನ್ನು ವಿರೋಧಿಸುತ್ತ ಬಂದಿದ್ದರು. ಹೀಗಾಗಿ ಮಂಗಳೂರು ನಾಯಕರ ಒತ್ತಡಕ್ಕೆ ಮಣಿದ ಡಿಕೆ ಶಿವಕುಮಾರ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸೂಚಿಸಿದ್ದು. ಅದರಂತೆ ಮಿಥುನ್ ರೈ ಕಣದಿಂದ ಆಚೆ ಬಂದಿದ್ದಾರೆ ಅಂತ ತಿಳಿದುಬಂದಿದೆ.