ವಿಟ್ಲ: ಕಸಾಯಿಖಾನೆಗೆ ನಾಲ್ಕು ಗೋವುಗಳು ಸಾಗಿಸುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಗ್ರಿ ನಿವಾಸಿ ಸಾಯಿಬು ಬ್ಯಾರಿ, ಪ್ರದೀಪ್ ಸಿಕ್ವೇರೋ ಎನ್ನಲಾಗಿದೆ.
ವಿಟ್ಲ ಎಸೈ ಸಂದೀಪ್ ಕುಮಾರ್ ಶೆಟ್ಟಿ ತಂಡ ಬೆಳ್ಳಂಬೆಳಿಗ್ಗೆ ಗಸ್ತು ತಿರುಗುತ್ತಿದ್ದಾಗ ಬೋಳಂತೂರು ಎಂಬಲ್ಲಿ ಅಕ್ರಮ ಗೋಸಾಗಾಟ ಪತ್ತೆ ಹಚ್ಚಿದ್ದು ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮುಸ್ಲಿಂ-ಕ್ರಿಶ್ಚಿಯನ್ ಸೇರಿ ಈ ಕೃತ್ಯಕ್ಕೆ ಕೈ ಹಾಕಿದ್ದು ಅಕ್ರಮ ಗೋ ಸಾಗಾಟದಲ್ಲೂ ಭಾವೈಕ್ಯತೆ ಮೆರೆದಿದ್ದಾರೆ ಎಂದು ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ.
ಅಕ್ರಮ ಗೋಸಾಗಾಟ ಮಾಹಿತಿ ತಿಳಿದ ಬಜರಂಗದಳ ಕಲ್ಲಡ್ಕ ಪ್ರಖಂಡದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಾಹನ ಸಮೇತ ಬಂಧಿಸಿದ್ದಾರೆ.
ಕೇರಳಕ್ಕೆ ಸಾಗಿಸುವ ಗ್ಯಾಂಗ್..!
ಬಂಧಿತ ಆರೋಪಿಯಾಗಿರುವ ಸಜೀಪ ಮೂಡ ಕರಾಜೆ ಮನೆ ನಿವಾಸಿ ಸಾಯಿಬು ಬ್ಯಾರಿ, ಈ ಹಿಂದೆಯೂ ಅನೇಕ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ಹಲವು ವರ್ಷಗಳಿಂದ ಅಕ್ರಮ ಸಾಗಾಟವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬಂದಿದ್ದಾನೆ. ಮನೆಯಲ್ಲಿಯೇ ಹಟ್ಟಿ ರಚಿಸಿದ್ದು ಗ್ರಾಹಕರಿಂದ ತಂದ ದನವನ್ನು ಕೇರಳಕ್ಕೆ ಅಕ್ರಮ ಸಾಗಾಟ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆ ಅಬ್ಬಕ್ಕ ಪೊಲೀಸ್ ಪಡೆ ದಾಳಿ ನಡೆಸಿದಾಗ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿದ್ದ. ಕಲ್ಲು ತೂರಾಟ ನಡೆಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ. ಅಂತೆಯೇ ಪ್ರದೀಪ್ ಸಿಕ್ವೇರೋ ಕೂಡ ಅಕ್ರಮ ಗೋಸಾಗಾಟ ಮಾಡುವ ವ್ಯಕ್ತಿ ಎಂಬ ಆರೋಪವೂ ಇದೆ.