Sunday, June 29, 2025
spot_imgspot_img
spot_imgspot_img

ವಿಟ್ಲ: ಕಲಾಕೃತಿಗೆ ಕಳೆನೀಡುವ ಕಲೆಗಾರ ಜಗದೀಶ್ ಚಂದ್ರ ರೈ ದೇವಸ್ಯ

- Advertisement -
- Advertisement -

ಕಾಲ ಬದಲಾದಂತೆ ಮನುಷ್ಯ ತನ್ನ ಸೌಂದರ್ಯಕ್ಕೆ ಮಾತ್ರವಲ್ಲದೆ ತನ್ನ ಸುತ್ತಮುತ್ತಲಿನ ಪರಿಸರ, ಮನೆ, ಧಾರ್ಮಿಕ ಕೇಂದ್ರ ಮುಂತಾದವುಗಳ ಅಂದ ಚೆಂದಕ್ಕೂ ಮಹತ್ವ ನೀಡುತ್ತಿದ್ದಾನೆ. ಈ ಕಾರಣದಿಂದಲೇ ಇಂದು ಹಲವು ಉದ್ಯಮಗಳು ಅಭಿವೃದ್ಧಿಯ ಹಾದಿ ಹಿಡಿದಿದ್ದು, ಇವುಗಳಲ್ಲಿ ಮರದ ಕೆತ್ತನೆಯ ಉದ್ಯಮವೂ ಒಂದು. ಮರದ ಕೆತ್ತನೆ ಕೆಲಸಗಳು ನಿಜವಾಗಿಯೂ ಒಂದು ಅದ್ಘುತ ಸೃಷ್ಟಿ. ಸೂಕ್ಷ್ಮತೆಯ ಜೊತೆ ಮನಸ್ಸನ್ನು ಏಕಾಗ್ರತೆಯಲ್ಲಿರಿಸಿದಾಗ ಮಾತ್ರ ತಮ್ಮ ಕೆಲಸದಲ್ಲಿ ಪರಿಪೂರ್ಣತೆಯ ಕಲಾಕೃತಿಯನ್ನು ರಚಿಸಲು ಸಾಧ್ಯ. ಇಂತಹ ಅನೇಕ ಕಲಾಕೃತಿಗಳನ್ನು ಮರದ ಕೆತ್ತನೆಯ ಮೂಲಕ ರಚಿಸಿ ತಾನು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಬಂದಿರುವ ಪ್ರಯೋಗಶೀಲ ಕಲಾವಿದರೇ ಜೇಸಿ ರೈ ದೇವಸ್ಯ.

ವಿಟ್ಲ ಸಮೀಪದ ದಿ.ನಾರಾಯಣ್ ರೈ ಹಾಗೂ ಶ್ರೀಮತಿ ಸರಸ್ವತಿಯವರ ದಂಪತಿಗಳ ಪುತ್ರನಾಗಿರುವ ಸಜನಶ್ರೀ ಆರ್ಟ್ಸ್ನ ಮಾಲಕ ಶಿಲೆ ಮತ್ತು ಕಾಷ್ಠಶಿಲ್ಪಿ ಜಗದೀಶ್ ಚಂದ್ರ ರೈಯವರು ಅನೇಕ ಕಲಾಕೃತಿಗಳನ್ನು ರಚಿಸಿ ತಮ್ಮ ಕೆಲಸದಲ್ಲಿ ಶಹಬ್ಬಾಶ್ ಎಂದೆನಿಸಿಕೊಂಡ ಅದ್ಭುತ ಶಿಲ್ಪಕಲಾಗಾರ. ಒಬ್ಬ ಕಲಾವಿದ ಆದವನಿಗೆ ಗುರಿ ಇದ್ದರೆ ಎನಾನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಜಗದೀಶ್ ಚಂದ್ರ ರೈ ರವರ ಶಿಲ್ಪ ಕಲಾಕೃತಿಗಳು ಸಾಕ್ಷಿ. “ಕಲೆ” ಎನ್ನುವುದು ಒಂದು ಸುಪ್ತ ಪ್ರತಿಭೆ. ಇವರ ಶಿಲ್ಪಾ ಕಲಾ ಕೃತಿಗಳನ್ನು ನೋಡಿದಾಗ ನಮ್ಮ ಸಮಾಜದಲ್ಲಿ ಇರುವ ಹಲವು ರೀತಿಯ ವಿಚಾರಗಳು ಧಾರ್ಮಿಕ ಭಾವನೆಗಳಿಗೆ ತನ್ನದೇ ರೂಪದಲ್ಲಿ ಜೀವ ನೀಡುವ ಅದ್ಬುತ ಕಲಾವಿದನು ಹೌದು.

ಈ ಕಲಾವಿದನ ಕೌಶಲ್ಯ ಮತ್ತು ಕರ್ತವ್ಯ ನಿಷ್ಠೆಯ ಫಲವಾಗಿ ವಿಟ್ಲ ಪಂಚಲಿಂಗೇಶ್ವರ ದೇವಳದ ಮರದ ಕೆತ್ತನೆಗಳಲ್ಲಿ ಅಪೂರ್ವ ಕಲಾಕೃತಿಗಳು ಮೂಡಿಬಂದಿವೆ. ವಿಟ್ಲದಲ್ಲಿ ಪ್ರಥಮ ಬಾರಿಗೆ ಥರ್ಮಕೋಲ್‌ನ್ನು ಉಪಯೋಗಿಸಿ ಶಿವನ ಸುಂದರವಾದ ವಿಗ್ರಹವನ್ನು ಕೆತ್ತಲಾಗಿತ್ತು, 6 ಅಡಿ ಎತ್ತರದ ಈ ವಿಗ್ರಹವನ್ನು ವಿಟ್ಲ ಜಾತ್ರೋತ್ಸವದ ಸಂದರ್ಭದಲ್ಲಿ ದೇಗುಲದ ಪುಷ್ಕರಣಿಯ ಮಧ್ಯೆ ಸ್ಥಾಪಿಸಲಾಗುತ್ತದೆ. ಶಿವನ ತಲೆಯಲ್ಲಿ ಗಂಗಾವತರಣದೊಂದಿಗೆ ಸ್ಥಾಪಿತನಾದ ಮಹೇಶ್ವರ ಜಪಮುದ್ರೆಯಲ್ಲಿ ಕುಳಿತ ಶಿವನನ್ನು ಕಂಡರೆ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾದಂತೆ ನೋಡುಗರನ್ನು ಆಕರ್ಷಿಸುತ್ತದೆ. ಹೀಗೆ ಇವರ ಕೈಚಲಕದಲ್ಲಿ ಮೂಡಿ ಬಂದಿರುವ ವಿಟ್ಲ ಪಂಚಲಿಂಗೇಶ್ವರ ದೇವಾಲಯದ ಕಲಾಕೃತಿ ಅದ್ಭುತವಾಗಿದೆ.

ಎರುಂಬು ಶಂಕರನಾರಾಯಣ ದೇವಸ್ಥಾನದ ಗಣೇಶ ಕೃಷ್ಣಶಿಲಾ ಪೂಜಾವಿಗ್ರಹ, ಅಳಿಕೆ ಸತ್ಯಸಾಯಿ ಆಸ್ಪತ್ರೆಯ ಎರಡು ಅಡಿಯ ಗಣಪತಿ ಶಿಲಾವಿಗ್ರಹ, ಕಾರವಾರ ಕರಾವಳಿ ಉತ್ಸವದ ಆಕರ್ಷಣೀಯ ೨೨ ಅಡಿಯ ಶಿವನ ವಿಗ್ರಹ (ಬೆಂಡು), ಸೇರಿದಂತೆ ಬೆಂಗಳೂರಿಗೆ ಸ್ವಾಮೀ ವಿವೇಕಾನಂದ ಹಾಗೂ ಸರಸ್ವತಿ ವಿಗ್ರಹ, ಪುಟ್ಟಪರ್ತಿಗೆ ಬಾಲಾಜಿ ವಿಗ್ರಹ, ಕಲಬುರ್ಗಿ ಕಂಪು ಉತ್ಸವಕ್ಕೆ “ತನ್ನ ಏಳಿಗೆಗೆ ತಾನೇ ಶಿಲ್ಪಿ” ಸಮಕಾಲೀನ ಕಲೆ, ಮುಂತಾದ ಕಲಾ ಆಕೃತಿಗಳನ್ನು ರಚಿಸಿ ಕರ್ನಾಟಕದಾದ್ಯಂತ ತಮ್ಮ ಕಲಾಚತುರತೆಯನ್ನು ಪಸರಿಸಿರುವ ಜೆಸಿ ರೈಯವರು ಹಲವು ಅದ್ದೂರಿ ಕಾರ್ಯಕ್ರಮಗಳ ವೇದಿಕೆ ವಿನ್ಯಾಸದ ಬೆಂಡಿನ ಕಲಾಕೃತಿಗಳನ್ನು ತಯಾರಿಸಿಕೊಟ್ಟಿರುತ್ತಾರೆ.

ಸೆ.೧೮ ರಂದು ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಿತಿ ಹಾಗೂ ಊರವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರನ್ನು ಧರ್ಮಸ್ಥಳದಲ್ಲಿ ಅಭಿನಂದಿಸಲಾಗಿತ್ತು. ಈ ಸಂದರ್ಭದಲ್ಲಿ ಜೆಸಿ ರೈ ಇವರು ಶಿವಾನಿ ಮರದಲ್ಲಿ ರಚಿಸಿರುವ ವಿಟ್ಲ ದೇವಸ್ಥಾನದ ಪ್ರತಿಕೃತಿಯನ್ನು ಸ್ಮರಣಿಕೆಯಾಗಿ ನೀಡಲಾಯಿತ್ತು. ಜೆಸಿ ರೈಯವರ ಕೈಚಳಕದಲ್ಲಿ ಅದ್ಭುತವಾಗಿ ಮೂಡಿಬಂದ ಈ ಪ್ರತಿಕೃತಿಯ ಬಗ್ಗೆ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರಳ ವ್ಯಕ್ತಿತ್ವದ, ಮದು ಸ್ವಭಾವದ ಜಗದೀಶ್‌ಚಂದ್ರ ರೈಯವರು ಹಲವು ದೇವಳಗಳಲ್ಲಿ ಬೇರೆ ಬೇರೆ ರೀತಿಯ ಕೆತ್ತನೆಗಳನ್ನು ಮಾಡಿದ್ದು, ಆಯಾ ಜಾಗದಲ್ಲಿ ತನ್ನ ಮನದಲ್ಲಿ ಮೂಡಿದ ಮುಂದಿನ ಪೀಳಿಗೆಗೆ ಉಪಯೋಗವಾಗುವ ಕಲಾಕತಿಗಳನ್ನು ರಚಿಸಿದ್ದಾರೆ. ಇಂತಹ ಕಲಾತ್ಮಕ ಕೆತ್ತನೆ ಮಾಡುವಲ್ಲಿ ಪ್ರೋತ್ಸಾಹ ಮತ್ತು ಆರ್ಥಿಕ ಬೆಂಬಲ ನೀಡಿದ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೆಲಸದಲ್ಲಿ ಸಹಕರಿಸಿದ ಸಹವರ್ತಿಗಳು, ಸಹಾಯಕರ ಬೆಂಬಲವನ್ನು ಸದಾ ಸ್ಮರಿಸುತ್ತಾರೆ.

ಜಗದೀಶ್‌ಚಂದ್ರ ರೈಯಂತಹ ಕಲಾವಿದರಿಗೆ ಇನ್ನಷ್ಟು ಅವಕಾಶ ಮತ್ತು ಪ್ರೋತ್ಸಾಹ ಕಲ್ಪಿಸಿಕೊಟ್ಟಲ್ಲಿ ಹೊಸ ಹೊಸ ಕಲಾಕೃತಿಗಳು, ಕೆತ್ತನೆಗಳು ಮೂಡಿಬರುವುದರಲ್ಲಿ ಸಂಶಯವಿಲ್ಲ. ಕಣ್ಮರೆಯಾಗುತ್ತಿರುವ ಗ್ರಾಮೀಣ ಚಟುವಟಿಕೆಗಳನ್ನು ಮುಂದಿನ ಪೀಳಿಗೆ ಸವಿಯಲು ಮತ್ತು ಯುವ ಕಲಾವಿದರಿಗೆ ಕಲಿಯಲು ಇವರು ತಯಾರಿಸಿದ ಕಲಾಕೃತಿಗಳು ಮಾದರಿಯಾಗಿವೆ.

astr
- Advertisement -

Related news

error: Content is protected !!