ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಶ್ರದ್ಧಾ ಹತ್ಯೆ ಮಾದರಿಯೇ ಮತ್ತೊಂದು ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಬೇರೊಂದು ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಇದನ್ನು ತಿಳಿದ ಯುವತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಯುವಕ ಪ್ರೇಯಸಿಯನ್ನು ಕೊಲೆಗೈದಿದ್ದಾನೆ. ನಿಕ್ಕಿ ಯಾದವ್ (೨೩) ಕೊಲೆಯಾದ ಯುವತಿ. ಸಾಹಿಲ್ ಗೆಹಲೋತ್ ಕೊಲೆಗೈದ ಪಾತಕಿ. ಈತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ನಿಕ್ಕಿ ಯಾದವ್ನನ್ನು ಕೊಲೆಗೈದ ಬಳಿಕ ಆಕೆಯ ದೇಹವನ್ನು ತನ್ನ ಢಾಬಾದ ರೆಫ್ರಿಜರೇಟರ್ನಲ್ಲಿ ತುಂಬಿ ಅದೇ ದಿನ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ, ನೈಋತ್ಯ ದೆಹಲಿಯ ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಗೆಹಲೋತ್ ಎಂಬಾತನನ್ನು ಬಂಧಿಸಲಾಗಿದೆ. ಪ್ರೇಮಿಗಳ ದಿನದಂದು ಘಟನೆ ಬೆಳಕಿಗೆ ಬಂದಿದ್ದು, ಕೊಲೆಯಾದ ನಾಲ್ಕು ದಿನಗಳ ನಂತರ ಶವವನ್ನು ರೆಸ್ಟೋರೆಂಟ್ನಲ್ಲಿರುವ ರೆಫ್ರಿಜರೇಟರ್ನಿಂದ ಹೊರತೆಗೆಯಲಾಗಿದೆ.
ಬೇರೊಬ್ಬ ಮಹಿಳೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಸಂಗತಿಯನ್ನು ಮರೆಮಾಚಿದ್ದ. ಮದುವೆಯ ಬಗ್ಗೆ ತಿಳಿದಾಗ ನಿಕ್ಕಿ ಜಗಳ ಮಾಡಿದ್ದಾಳೆ . ಈ ಸಂದರ್ಭ ಸಾಹಿಲ್, ಮೊಬೈಲ್ ಡೇಟಾ ಕೇಬಲ್ ಅನ್ನು ಕುತ್ತಿಗೆಗೆ ಬಿಗಿದು ಕೊಂದಿದ್ದಾನೆ. ನೀನು ಮತ್ತೊಬ್ಬ ಮಹಿಳೆಯನ್ನು ಮದುವೆಯಾದರೆ ಪ್ರಕರಣ ದಾಖಲಿಸುವುದಾಗಿ ನಿಕ್ಕಿ, ಸಾಹಿಲ್ಗೆ ಎಚ್ಚರಿಕೆ ನೀಡಿದ್ದಳು.
‘ಫೆಬ್ರುವರಿ 9ರಂದು ಗೆಳೆಯನಿಗೆ ಕರೆ ಮಾಡಿ ದೆಹಲಿಯ ಉತ್ತಮ್ ನಗರಕ್ಕೆ ಬರಲು ನಿಕ್ಕಿ ಹೇಳಿದ್ದಳು. ಕಾರಿನಲ್ಲಿ ನಿಕ್ಕಿಯನ್ನು ಕೂರಿಸಿಕೊಂಡು ಸಾಹಿಲ್ ಹೊರಟಿದ್ದಾನೆ. ಈ ಸಂದರ್ಭ ಬೇರೆ ಮದುವೆ ಆಗದಂತೆ ನಿಕ್ಕಿ ಹೇಳಿದ್ದಾಳೆ. ಅಲ್ಲದೆ, ಗೋವಾಗೆ ತೆರಳಲು ವಿಮಾನದ ಟಿಕೆಟ್ ಸಹ ಬುಕ್ ಮಾಡಿದ್ದಳು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕಾರಿನಲ್ಲೇ ಕೊಲೆ ನಡೆದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.