



ಚಾಮರಾಜನಗರ: ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿಗೆ ನ್ಯಾಯ ಇನ್ನೂ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಚಾಮರಾಜನಗರದಲ್ಲಿ ಡಿಸಿ, ಎಸ್ಪಿ, ಸಿಇಒ, ಡಿವೈಎಸ್ಪಿ ಎಲ್ಲರೂ ಮಹಿಳಾ ಅಧಿಕಾರಿಗಳಿದ್ದರೂ ನೊಂದ ಬಾಲಕಿಗೆ ಮಾತ್ರ ಇನ್ನೂ ಕೂಡ ನ್ಯಾಯ ಸಿಗಲಿಲ್ಲ ಎಂದು ಬಾಲಕಿಯ ಪೋಷಕರು ಆರೋಪ ಮಾಡಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಾಲ್ವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದು 25 ದಿನ ಕಳೆದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.6 ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಹೊಣಕನಪುರ ಬಳಿ, ಬಾಲಕಿ ಶಾಲೆಗೆ ಹೋಗಿ ವಾಪಸ್ ಬರುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅರಣ್ಯ ಇಲಾಖೆಯ ಗಾರ್ಡ್ ಶಿವಣ್ಣ ನಾಯಕನಿಂದ ಲೈಂಗಿಕ ಕಿರುಕುಳ ಎಸಗಲಾಗಿದೆ ಎಂದು ಬಾಲಕಿ ಪೋಷಕರು ದೂರು ನೀಡಿದ್ದರು. ದೂರಿನನ್ವಯ ಈತನ ವಿರುದ್ಧ ಚಾಮರಾಜನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ ಇನ್ನೂ ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆಯಾಗಿಲ್ಲ. ಅಲ್ಲದೇ ಕರ್ತವ್ಯಕ್ಕೆ ರಾಜಾರೋಷವಾಗಿ ಅರಣ್ಯ ಇಲಾಖೆ ಗಾರ್ಡ್ ಶಿವಣ್ಣನಾಯಕ ಹಾಜರಾಗುತ್ತಿದ್ದಾನೆ. ಆರೋಪಿಯನ್ನು ಬಂಧಿಸದೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆಂದು ಬಾಲಕಿ ಪೋಷಕರು ಆರೋಪ ಮಾಡಿದ್ದಾರೆ.

ಈ ವಿಚಾರವಾಗಿ ಎಎಸ್ಪಿ ಸುಂದರ್ ರಾಜ್ ಮಾತನಾಡಿದ್ದು, ಈ ಪ್ರಕರಣದಲ್ಲಿ ಎರಡು ಕಡೆಯಿಂದ ದೂರು ದಾಖಲಾಗಿದೆ. ಹೀಗಾಗಿ ಕೂಡಲೇ ಈ ಬಗ್ಗೆ ವಿಚಾರಿಸಿ ಕ್ರಮವಹಿಸುತ್ತೇನೆ. ಯಾವ ಕಾರಣಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ ಎಂಬುದರ ಬಗ್ಗೆ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ. ಈಗಾಗಲೇ ತನಿಖೆ ಕೂಡ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
