ವಿಟ್ಲ : ಕೇರಳದಿಂದ ಅಕ್ರಮವಾಗಿ ಬರುವ ಬಾಕ್ಸೈಟ್ ಮಣ್ಣು ತುಂಬಿದ ಸುಮಾರು 7 ಲಾರಿಗಳನ್ನು ವಿಟ್ಲ ಪೊಲೀಸರು ತಡೆದಿದ್ದಾರೆ. ಈ ದಂಧೆಯು ಅನೇಕ ತಿಂಗಳಿನಿಂದ ನಡೆಯುತ್ತಿದ್ದು, ಸದ್ಯ ಇದಕ್ಕೆ ವಿಟ್ಲ ಪೊಲೀಸರು ಕಡಿವಾಣ ಹಾಕಿದ್ದಾರೆ.
ವಿಟ್ಲ ಮೂಲಕ ಅಕ್ರಮವಾಗಿ ಬಳ್ಳಾರಿ, ಸಂಡೂರಿಗೆ ಬಾಕ್ಸೈಟ್ ಸಾಗಿಸುತ್ತಿದ್ದ ಏಳು ಭಾರೀ ಸರಕು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಕರಾವಳಿಯಲ್ಲಿ ನಡೆಯುವ ಅವ್ಯಾಹತ ದಂಧೆಯ ಪಾಲಿಗೆ ಈಗ ಮಣ್ಣು ಗಾರಿಕೆಯೂ ಸೇರ್ಪಡೆಗೊಂಡಿದೆ. ಮರಳುಗಾರಿಕೆಯ ಜೊತೆಗೆ ಮಣ್ಣು ದಂಧೆಯೂ ಭಾರೀ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಬೆಟ್ಟ ಗುಡ್ಡಗಳನ್ನು ಅಗೆದು ಮಣ್ಣನ್ನು ಹೊರ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದೆ.
ಅಲ್ಲದೇ ವಿಟ್ಲ-ಕನ್ಯಾನ ರಸ್ತೆಯಲ್ಲಿ 12 ಚಕ್ರದ ಲಾರಿಗಳಿಗೆ ಆರ್.ಟಿ.ಓ ಅನುಮತಿ ಇದೆಯಾ? ಅಥವಾ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆಯೇ.? ಎಂಬ ಸಂಶಯ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಮರಳು ಮಾಫಿಯಾಕ್ಕೆ ಹೆಸರು ವಾಸಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಣ್ಣು ದಂಧೆ ಆರಂಭಗೊಂಡಿದೆ. ಕೃಷಿ ಭೂಮಿ, ಕುಮ್ಕಿ ಜಮೀನು ಹೀಗೆ ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹಲವೆಡೆ ಇಂತಹ ಮಣ್ಣು ಸಾಗಾಟದ ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ ಇಲ್ಲಿನ ಮಣ್ಣಿಗೆ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ.
ಆದರೆ ಈ ಮಣ್ಣು ಸಾಗಾಟದ ಲಾರಿಗಳಿಂದಾಗಿ ಸ್ಥಳೀಯ ಜನರು ಪ್ರಾಣಭಯದಿಂದ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಈ ಮಣ್ಣು ಆಂಧ್ರಪದೇಶಕ್ಕೆ ರವಾನೆಯಗುತ್ತಿದೆ. ಸಿಮೆಂಟ್ ಉತ್ಪಾದನೆಗೆ ಈ ಮಣ್ಣು ಪೂರಕವಾದ ಹಿನ್ನಲೆಯಲ್ಲಿ ನಿಗದಿತ ಪರ್ಮೀಟ್ಗಿಂತ ಹೆಚ್ಚು ಲೋಡ್ ಮಣ್ಣು ಸಾಗಾಟವಾಗುತ್ತಿದೆ ಅನ್ನುವುದು ಸ್ಥಳೀಯರ ಆರೋಪವಾಗಿದೆ. ಇದೇ ರೀತಿಯ ಪ್ರಕ್ರಿಯೆ ನಡೆದಲ್ಲಿ ಬಳ್ಳಾರಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಣ್ಣಿನ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.