ನ್ಯೂಯಾರ್ಕ್ನಲ್ಲಿ ಅಧ್ಯಯನ ಮಾಡುತ್ತಿರುವ ಪುನೀತ್ ರಾಜ್ಕುಮಾರ್ ಮಗಳು ಧೃತಿ ಅವರು ಇಂದು (ಅಕ್ಟೋಬರ್ 30) ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 1.30ಕ್ಕೆ ಬೆಂಗಳೂರು ವಿಮಾನ ಏರಿದ್ದಾರೆ.
ಸಂಜೆ 4.15ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧೃತಿ ಆಗಮಿಸಲಿದ್ದಾರೆ. ಏರ್ಪೋರ್ಟ್ನಿಂದ ನೇರವಾಗಿ ಕಂಠೀರವ ಸ್ಟೇಡಿಯಂಗೆ ಅವರು ಬರಲಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಅವರು ಅಮೆರಿಕಕ್ಕೆ ತೆರಳಿದ್ದರು.
ದೆಹಲಿಯಲ್ಲಿ ಧೃತಿ ವಿಮಾನ ಬದಲಾವಣೆಗೆ ಕರ್ನಾಟಕ ಭವನದ ಅಧಿಕಾರಿಗಳ ಸಹಾಯ ಮಾಡಿದ ಬಗ್ಗೆ ವರದಿ ಆಗಿದೆ. ಬೆಂಗಳೂರಿಗೆ ತೆರಳಲು ಅಧಿಕಾರಿಗಳು ಧೃತಿಗೆ ಬೋರ್ಡಿಂಗ್ ಪಾಸ್ ರೆಡಿ ಮಾಡಿದ್ದರು. ಧೃತಿ ಬೆಂಗಳೂರು ವಿಮಾನ ಹತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಂತ್ಯಕ್ರಿಯೆ ಯಾವಾಗ?
ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿ ಆಗಿದ್ದವು. ಇಂದು (ಅಕ್ಟೋಬರ್ 30) ಸಂಜೆಯೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿತ್ತು. ಆದರೆ, ಈಗ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಿದ್ದು, ಭಾನುವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.