ಆಂಧ್ರ ಪ್ರದೇಶ: ಅಕ್ರಮ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ಸೊಸೆಯನ್ನೇ ಹತ್ಯೆ ಮಾಡಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮಲ್ಕಿಪುರಂ ಮಂಡಲದ ಮೆಡಿಚೆರ್ಲಾ ಪಾಳ್ಯಂನಲ್ಲಿ ನಡೆದಿದೆ.
ಮೃತ ಸೊಸೆಯನ್ನು ಪ್ರಿಯಾಮಣಿ (25) ಎನ್ನಲಾಗಿದೆ. ಆರೋಪಿ ಮಾವನನ್ನು ಸತ್ಯನಾರಾಯಣ ಎಂದು ಗುರುತಿಸಲಾಗಿದೆ.
ಆರೋಪಿ ಸತ್ಯನಾರಾಯಣ ಅವನ ಮಗ ವಿಜಯ್ ಕುಮಾರ್ನ ಜೊತೆ ಪ್ರಿಯಾಮಣಿ ಮದುವೆಯಾಗಿದ್ದಳು. ವಿಜಯ್ ಕುಮಾರ್ ಕತಾರ್ನಲ್ಲಿ ಕೆಲಸ ಮಾಡುತ್ತಿದ್ದು, ಪ್ರಿಯಾಮಣಿಯ ಪಾಲಕರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೆಲೆಸಿದ್ದಾರೆ.
ಪ್ರಿಯಾಮಣಿಗೆ ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು.ಈ ಕಾರಣಕ್ಕೆ ಮಾವ ಸತ್ಯನಾರಾಯಣ ಹಾಗೂ ಸೊಸೆ ಪ್ರಿಯಾಮಣಿ ಕುಟುಂಬದ ನಡುವೆ ಆಗಾಗ ಜಗಳ ಉಂಟಾಗುತ್ತಿತ್ತು.
ಜುಲೈ 22ರಂದು ಪ್ರಿಯಾಮಣಿ ಬೇರೊಬ್ಬ ಯುವಕನೊಂದಿಗೆ ಓಡಿ ಹೋಗಿದ್ದಾಳೆಂದು ಆರೋಪಿಸಿ ಸತ್ಯನಾರಾಯಣ ಸೊಸೆ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದ. ಪೊಲೀಸ್ ಮಧ್ಯಸ್ತಿಕೆಯಿಂದಾಗಿ ಪ್ರಿಯಾಮಣಿ ಮನೆಗೆ ಹಿಂತಿರುಗಿದ್ದಳು. ಸಂಧಾನ ಮಾಡಿ ಮನೆಗೆ ಕಳುಹಿಸಲಾಗಿತ್ತು.
ಪ್ರಿಯಾಮಣಿ ಮತ್ತು ಸತ್ಯನಾರಾಯಣನ ನಡುವೆ ಶುಕ್ರವಾರ ರಾತ್ರಿ ಜಗಳ ನಡೆದಿದ್ದು, ಗಲಾಟೆಯಿಂದಾಗಿ ತಾಳ್ಮೆ ಕಳೆದುಕೊಂಡ ಸತ್ಯನಾರಾಯಣ ಅಂಡಮಾನ್ನಿಂದ ಬಂದಿದ್ದ ಪ್ರಿಯಾಮಣಿ ತಾಯಿಯ ಮುಂದೆಯೇ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.