ಪಾಪಿ ಮಗನೊಬ್ಬ ಅನಾರೋಗ್ಯಕ್ಕೀಡಾದ ತನ್ನ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರ ದ ದೊಂಬಿವ್ಲಿಯಲ್ಲಿ ನಡೆದಿದೆ.
21 ವರ್ಷದ ಯುವಕ ತೇಜಸ್ ಶಿಂಧೆ ಅನಾರೋಗ್ಯಕ್ಕೀಡಾದ ತನ್ನ 68 ವರ್ಷದ ತಂದೆ ಶ್ಯಾಮ್ ಸುಂದರ್ ಶಿಂಧೆಯನ್ನು ಕೊಲೆ ಮಾಡಿದ್ದಾನೆ. ಶ್ಯಾಮ್ ಸುಂದರ್ ಮಲಗಿದ್ದ ಸಂದರ್ಭದಲ್ಲಿ ಅವರ ತಲೆಗೆ ತೇಜಸ್ ಕಲ್ಲು ತೂರಿದ್ದಾನೆ. ನಂತರ ಚಾಕುವಿನಿಂದ ಕತ್ತು ಸೀಳಿದ್ದಾನೆ. ಕೊಲೆಯ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ತಂದೆಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ದಾವಿಸಿ ಪೊಲೀಸರು ತೇಜಸ್ನನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಈ ಮಧ್ಯೆ ಆರೋಗ್ಯದ ಕುರಿತಾಗಿ ಅಪ್ಪ-ಮಗನ ನಡುವೆ ದಿನನಿತ್ಯ ಜಗಳಗಳಾಗುತ್ತಿತ್ತು. ಅಂತೆಯೇ ತಾಯಿ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ತೆರಳಿದ್ದ ಸಮಯದಲ್ಲಿ ತಂದೆ-ಮಗನ ಮಧ್ಯೆ ವಾಗ್ವಾದ ನಡೆಯಿತ್ತು. ಜೋರಾಗಿ ಜಗಳ ನಡೆದ ಬಳಿಕ ಶ್ಯಾಮ್ ಸುಂದರ್ ಹೋಗಿ ಮಲಗಿಕೊಂಡಿದ್ದಾರೆ. ಇತ್ತ ತಂದೆ ಮೇಲೆ ಸಿಟ್ಟಿಗೆದ್ದ ಮಗ ಅವರ ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾನೆ. ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ.