ಸೋಮವಾರ ವಿಜಯವಾಡಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಭೀಮಾವರಂನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ ಪ್ರತಿಮೆಯನ್ನುಅನಾವರಣಗೊಳಿಸಿದ್ದಾರೆ.ಇಂದು ಬೆಳಗ್ಗೆ ವಿಜಯವಾಡ ವಿಮಾನನಿಲ್ದಾಣದಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ರಾಜ್ಯಪಾಲ ಬಿಸ್ವಭೂಷಣ್ ಹರಿಶ್ಚಂದ್ರನ್ ಅವರು ಮೋದಿ ಅವರನ್ನು ಬರ ಮಾಡಿಕೊಂಡರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು ಅದರೊಂದಿಗೇ ಅಲ್ಲೂರಿ ಸೀತಾರಾಮರಾಜು ಅವರ 125ನೇ ವರ್ಷವನ್ನಾಚರಿಸುತ್ತಿದೆ.
ಅದೇ ವೇಳೆ ದೇಶದ ಸ್ವಾತಂತ್ರ್ಯಕ್ಕಾಗಿರುವ ರಾಂಪ ಕ್ರಾಂತಿಯ ನೂರನೇ ವರ್ಷವನ್ನು ಆಚರಿಸುತ್ತಿದೆ. ಅವರ ಮುಂದೆ ನಾನು ತಲೆಬಾಗಿ ನಮನ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಗಾರು ಅವರ 125ನೇ ಜನ್ಮ ದಿನಾಚರಣೆ ಮತ್ತು ರಾಂಪಕ್ರಾಂತಿಯ 100ನೇ ವರ್ಷಆಚರಣೆ ವರ್ಷದಾದ್ಯಂತ ಆಚರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಭೇಟಿ ನಿಮಿತ್ತ ಬಿಗಿ ಭದ್ರತೆಯನ್ನೊದಗಿಸಲಾಗಿದೆ ಭೀಮಾವರಂ ಮತ್ತು ಗನ್ನಾವಂರನಲ್ಲಿ ಬಿಗಿ ಭದ್ರತೆಯನ್ನೊದಗಿಸಲಾಗಿದೆ. ಡಿಜಿಪಿ ಕೆವಿ ರಾಜೇಂದ್ರನಾಥ ರೆಡ್ಡಿ ಅವರು ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಭೀಮಾವರಂ ನಲ್ಲಿ ನಾವು 2,200 ಪೊಲೀಸ್ ಪಡೆಯನ್ನು ನಿಯೋಜಿಸಿದ್ದೇವೆ. ಗನ್ನಾವರಂ ವಿಮಾನ ನಿಲ್ದಾಣದಲ್ಲಿ ನಾವು 800 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ ಎಂದು ರಾಜೇಂದ್ರ ನಾಥ ರೆಡ್ಡಿ ಹೇಳಿದ್ದಾರೆ.
ಭೀಮಾವರಂನಲ್ಲಿ ಭಾಷಣ ನಂತರ ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ಹೋರಾಟಗಾರ ಪಾಲಸಾ ಕೃಷ್ಣ ಮೂರ್ತಿ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಪಾಲಸಾ ಅವರ ಪುತ್ರಿ ಪಾಲಸಾ ಕೃಷ್ಣ ಭಾರತಿ ಅವರನ್ನೂ ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದಾರೆ.
ಅಲ್ಲೂರಿ ಸೀತಾರಾಮ ರಾಜು ಅವರ ಅಳಿಯ ಶ್ರೀರಾಮ ರಾಜು ಮತ್ತು ಅಲ್ಲೂರಿ ಅವರ ಆಪ್ತ ಮಲ್ಲು ದೋರಾಅವರ ಪುತ್ರ ಬೋದಿ ದೋರಾ ಅವರನ್ನು ಸನ್ಮಾನಿಸಿದ್ದಾರೆ. ಮಾನ್ಯಂ ವೀರುಡು (ಕಾಡಿನ ಹೀರೋ) ಎಂದೇ ಜನಪ್ರಿಯರಾಗಿರುವ ಅಲ್ಲೂರಿ ಸೀತಾರಾಮರಾಜು 1897 ಜುಲೈ4ರಂದು ಪಂಡರಂಗಿ ಗ್ರಾಮದಲ್ಲಿ ಜನಿಸಿದರು. ಅಲ್ಲೂರಿ ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಿದ ಮೋದಿ ಪಂಡರಂಗಿ, ಚಿಂತಾಪಳ್ಳಿ ಪೊಲೀಸ್ ಠಾಣೆ ಮತ್ತು ಮೊಗಲ್ಲುನಲ್ಲಿ ಸ್ಮಾರಕ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಭಾಷಣದ ವೇಳೆ ಮೋದಿಯವರು 1974ರಲ್ಲಿ ಬಿಡುಗಡೆಯಾದ ಅಲ್ಲೂರಿ ಸೀತಾರಾಮ ರಾಜು ಅವರ ಕುರಿತಾದ ತೆಲುಗು ವೀರ ಲೇವರಾ ಸಿನಿಮಾದ ಹಾಡಿನ ಕೆಲವು ಸಾಲುಗಳನ್ನೂ ಹೇಳಿದ್ದಾರೆ.