ಬೆಂಗಳೂರು: ಇಂದು ಕರ್ನಾಟಕ ಸರಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟವಾಗಲಿದೆ. ಕೋವಿಡ್-19 ಹೆಚ್ಚುತ್ತಿರುವ ಮಧ್ಯೆ ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಇಂದು ಬುಧವಾರ ನಡೆಯುವ ಸಭೆಯಲ್ಲಿ ಅನೌಪಚಾರಿಕವಾಗಿ ಮಾಹಿತಿ ಪಡೆದುಕೊಂಡಿದ್ದೇನೆ. ಇಂದು ಮಾರ್ಗಸೂಚಿ ಹೊರತರಲಾಗತ್ತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿ ಮಾಹಿತಿ ಪಡೆಯುತ್ತೇನೆ. ನಾಳೆ ಸಚಿವ ಸಂಪುಟ ಸಭೆ ಕರೆದಿದ್ದು ಅದರಲ್ಲಿ ಮುಂದಿನ ಕ್ರಮಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಸುತ್ತೇವೆ. ರಾಜ್ಯಕ್ಕೆ ಬೇಕಾದ ಮಾರ್ಗಸೂಚಿ, ಕ್ರಮಗಳನ್ನು ತರಲಾಗುವುದು ಎಂದರು.
ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಸರ್ಕಾರ ಬಹಳ ಮುಕ್ತವಾಗಿದೆ. ಸದ್ಯಕ್ಕೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಹಲವು ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಕೊರೋನಾ ಕ್ಲಸ್ಟರ್ ಗಳು ಏರ್ಪಟ್ಟಿರುವುದರಿಂದ ಶಾಲೆಗಳಲ್ಲಿ ಕಠಿಣ ಕ್ರಮ ತರಬೇಕಿದೆ. ಬರುವ ದಿನಗಳಲ್ಲಿ ಕ್ಲಸ್ಟರ್ ಗಳಿಗೆ ಮತ್ತು ಓಮಿಕ್ರಾನ್ ಬಗ್ಗೆ ಯಾವ ರೀತಿ ಮಾರ್ಗಸೂಚಿ ಹೊರಡಿಸಬೇಕೆಂದು ನಾಳೆಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಕೂಡ ಹಲವು ಮಾರ್ಗಸೂಚಿಗಳನ್ನು ಸಲಹೆ ನೀಡಿ ಕಳುಹಿಸಿದೆ. ಇವೆಲ್ಲವನ್ನು ಪರಾಮರ್ಶಿಸಿ ರಾಜ್ಯಕ್ಕೆ ಅನ್ವಯವಾಗುವಂತೆ ತರುತ್ತೇವೆ. ಕ್ರಿಸ್ ಮಸ್, ಹೊಸವರ್ಷಾಚರಣೆ ಬಗ್ಗೆ ಕೂಡ ನಿರ್ಧಾರ ಕೈಗೊಳ್ಳಲಾಗುವುದು ಎಂದರು.