ಬೆಳ್ತಂಗಡಿ: ತಾಲೂಕಿನ ಉಜಿರೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನೂತನ ಎಸ್ಪಿ ಆದೇಶದಂತೆ ಬಂಟ್ವಾಳ ಡಿವೈಎಸ್ಪಿ ನೇತೃತ್ವದ ತಂಡ ದಾಳಿ ನಡೆಸಿ ಬರಿಗೈಯ್ಯಲ್ಲೇ ವಾಪಾಸ್ಸಾದ ಬಳಿಕ ನಡೆದ ಬೆಳವಣಿಗೆಯಲ್ಲಿ ರಾಷ್ಟೀಯ ಹಿಂದೂ ಜಾಗರಣ ವೇದಿಕೆ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಪೊಲೀಸರ ಸಮ್ಮುಖದಲ್ಲಿ ನಡೆದ ದಾಳಿಯಲ್ಲಿ ದಲ್ಲಾಳಿಗಳನ್ನು ಬಂಧಿಸಿ, ಮಹಿಳೆಯರನ್ನು ವಶಕ್ಕೆ ಪಡೆದು ರಕ್ಷಿಸಲಾಗಿತ್ತು.
ಈ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಹಲವು ವರ್ಷಗಳಿಂದ ಉಜಿರೆ ಪೇಟೆಯಲ್ಲೇ ಕಾರ್ಯನಿರ್ವಹಿಸುತ್ತಿರುವ ಹಲವು ಲಾಡ್ಜ್ ಗಳ ಮಾಂಸ ದಂಧೆಗೆ ಸಣ್ಣ ಮಟ್ಟಿನ ಬ್ರೇಕ್ ಕೂಡಾ ಬಿದ್ದಿತ್ತು.
ಈಗ ಮತ್ತೆ ಹಸಿ ಮಾಂಸ ದಂಧೆಯ ಶುರುವಾಗಿದ್ದು, ನಿನ್ನೆ ರಾತ್ರಿ ವೇಳೆ ಹುಡುಗಿಯರನ್ನು ಕರೆ ತರುತ್ತಿದ್ದಾನೆ ಎನ್ನುವ ಆರೋಪದ ಮೇಲೆ ಓರ್ವ ಯುವಕನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ವಶಕ್ಕೆ ಪಡೆದ ಯುವಕನನ್ನು ಕಾಶಿಬೆಟ್ಟು ನಿವಾಸಿ ಯಶವಂತ್ ಎಂದು ಗುರುತಿಸಲಾಗಿದೆ.
ಈತ ಉಜಿರೆಯ ಕೆಲವು ಲಾಡ್ಜ್ಗಳಿಗೆ ಯುವತಿಯರನ್ನು ಕರೆ ತಂದು ಹಸಿ ಮಾಂಸ ದಂಧೆಯ ದಲ್ಲಾಳಿಗಳಿಗೆ ಸಹಕರಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈತನ ಸಹೋದರನನ್ನು ಕಳೆದ ಬಾರಿಯ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ನಿನ್ನೆಯೂ ಈತ ಯುವತಿಯೊಬ್ಬಳನ್ನು ಕರೆ ತಂದಿದ್ದು ಎನ್ನಲಾಗಿದ್ದು, ಇದೇ ಆರೋಪದಲ್ಲಿ ಆತನನ್ನು ತಡೆದು ಪ್ರಶ್ನಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.