ಉಡುಪಿ: ಕೇಳಾರ್ಕಳಬೆಟ್ಟು ಸ್ವರ್ಣೋದ್ಯಮ ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ನಡೆದ ಕಳ್ಳತನದ ಪ್ರಕರಣವನ್ನು ಭೇದಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಮೇದಿನಿಪುರ ಜಿಲ್ಲೆಯ ಸುಭಾಶಿಷ್ ಬೇರಾ (38) ಬಂಧಿತ ಆರೋಪಿ, ಬಂಧಿತನಿಂದ ಕಳವುಗೈದ ಅಂದಾಜು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನ.25 ರಂದು ಕೆಳಾರ್ಕಳಬೆಟ್ಟು ಗ್ರಾಮದ ಸ್ವರ್ಣೋದ್ಯಮ ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ರಾತ್ರಿ ಕಳವಾಗಿತ್ತು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ ಗೌಡ, ರಾಜಾಧಿಕಾರಿ ಗುರುನಾಥ ಬಿ. ಹಾದಿಮನಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯ ಬೆನ್ನು ಹತ್ತಿದ ಪೊಲೀಸರ ತಂಡದ ಪೊಲೀಸರು ಪಶ್ಚಿಮ ಬಂಗಾಳ ರಾಜ್ಯಕ್ಕೆ ತೆರಳಿ ಕಳ್ಳತನಗೈದ ಆರೋಪಿಯನ್ನು ಬಂಧಿಸಿ ಕಳವು ಗೈದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಈ ಹಿಂದೆ ಇದೇ ಸ್ವರ್ಣೋದ್ಯಮದಲ್ಲಿ ಕೆಲಸ ಮಾಡಿಕೊಂಡಿದ್ದ ಹಾಗೂ ಕಳ್ಳತನ ಮಾಡಿದ ಆನಂತರ ಅಲ್ಲಿದ್ದ ಮುಖದ ಗುರುತು ಸಿಗಬಾರದೆಂದು ಅಲ್ಲಿ ಅಳವಡಿಸಿದ ಸಿಸಿ ಕ್ಯಾಮರಾವನ್ನು ಪಕ್ಕದ ಬಾವಿಗೆ ಎಸೆದಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಬಳಿಕ ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಪೊಲೀಸರ ಮನವಿಯಂತೆ ಬಾವಿಯ 22 ಅಡಿ ಆಳಕ್ಕೆ ಮುಳುಗಿ 3 ಸಿಸಿ ಕ್ಯಾಮರಾಗಳನ್ನು ಹೊರತೆಗೆದು ಮಲ್ಪೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.