ಉಡುಪಿ: ಇಲ್ಲಿನ ಸಂತೆಕಟ್ಟೆಯಲ್ಲಿ ನಿನ್ನೆ ಹಾಡಹಗಲೇ ನಡುರಸ್ತೆಯಲ್ಲಿ ಪ್ರೇಯಸಿಗೆ ಚೂರಿ ಇರಿದು ಬಳಿಕ ತಾನೂ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಯುವಕ ಹಾಗು ಯುವತಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಮೃತ ಯುವತಿ ಉಡುಪಿಯ ಸಂತೆಕಟ್ಟೆ ಸಮೀಪ ಉದ್ಯೋಗಿಯಾಗಿರುವ ಯುವತಿ ಸೌಮ್ಯಶ್ರೀ ಭಂಡಾರಿ ಮತ್ತು ಯುವಕ ಸಂದೇಶ ಕುಲಾಲ್ ಪರಸ್ಪರ ಪ್ರೀತಿಸುತ್ತಿದ್ದರು.
ಘಟನೆಯ ವಿವರ: ವಾರದ ಹಿಂದೆಯಷ್ಟೇ ಯುವತಿ ಸೌಮ್ಯಶ್ರೀಗೆ ನಿಶ್ಚಿತಾರ್ಥ ಆಗಿದ್ದು, ಇದರಿಂದ ಕುಪಿತಗೊಂಡ ಪ್ರೇಮಿ ಸಂದೇಶ ಕುಲಾಲ್ ನಿನ್ನೆ ಸಂಜೆ ವೇಳೆಗೆ ಆಕೆ ಬ್ಯಾಂಕಿನಿಂದ ಮನೆಗೆ ವಾಪಸ್ ಆಗುತ್ತಿದ್ದ ಸಮಯದಲ್ಲಿ ಸಂತೆಕಟ್ಟೆ, ರಾಷ್ಟ್ರೀಯ ಹೆದ್ದಾರಿ ಬಳಿ ಅಡ್ಡಗಟ್ಟಿ, ಪ್ರೇಯಸಿ ಸೌಮ್ಯ ಜೊತೆ ಸಂದೇಶ್ ವಾಗ್ವಾದ ನಡೆಸಿದ್ದಾನೆ. ಜಗಳ ತಾರಕಕ್ಕೇರಿ ಪ್ರೇಮಿ ಚಾಕುವಿನಿಂದ ಇರಿದಿದ್ದಾನೆ.
ಇದನ್ನೂ ಓದಿ: ಉಡುಪಿ: ನಡುರಸ್ತೆಯಲ್ಲೇ ಪ್ರೇಯಸಿಗೆ ಚೂರಿ ಇರಿದು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ!
ಈ ವೇಳೆ ದ್ವಿಚಕ್ರ ವಾಹನದಿಂದ ಸೌಮ್ಯ ಕೆಳಗೆ ಬಿದ್ದಿದ್ದು, ಬಳಿಕ ಪಾಗಲ್ ಪ್ರೇಮಿ ಸಂದೇಶ್ ಅದೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾದೇ ಯುವತಿ ಸೌಮ್ಯ ನಿನ್ನೆ ಸಾವನ್ನಪ್ಪಿದರೆ ಯುವಕ ಸಂದೇಶ್ ಕುಲಾಲ್ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.