ಉಡುಪಿ: ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆ ಸಾವನಪ್ಪಿದ ಪ್ರಕರಣ ನಡೆದಿದ್ದು ಇದಕೆಲ್ಲಾ ಬಿ.ಆರ್.ಎಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಮಹಿಳೆ ಸಂಬಂಧಿಕರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಂದಾಪುರ ತಾಲೂಕಿನ ಕೋಟ ನಿವಾಸಿ ಉಷಾ ಅವರನ್ನು ಚೊಚ್ಚಲ ಹೆರಿಗೆಗೆಂದು ದಾಖಲಾಗಿತ್ತು. ಆದರೆ ಹೆರಿಗೆಯ ಬಳಿಕ ಉಂಟಾದ ಸಮಸ್ಯೆಯಿಂದ ಮಹಿಳೆ ಮಗು ಹೆತ್ತ ಬಳಿಕ ಸಾವನಪ್ಪಿದ್ದಾರೆ.
ಇದನ್ನೂ ಓದಿ: ವಿಟ್ಲ: ಅಪ್ರಾಪ್ತ ಶಾಲಾ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಆರೋಪ ಸಾಬೀತು
ಇದನ್ನೂ ಓದಿ: ಚಾರ್ಮಾಡಿ ಘಾಟ್ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ : ತಪ್ಪಿದ ಭಾರೀ ದುರಂತ
ಆದರೆ ಮಹಿಳೆ ಸಂಬಂಧಿಕರ ಪ್ರಕಾರ ಹೆರಿಗೆಯ ಸಮಯ ಬಂದಾಗ ವೈದ್ಯರು ಇನ್ನು ನಮಗೆ ಚಿಕಿತ್ಸೆ ನೀಡುವುದಕ್ಕೆ ಆಗೋಲ್ಲ ಬೇರೆ ಆಸ್ಪತ್ರೆಗೆ ಕೊಂಡೊಯ್ಯಿರಿ ಎಂದು ಹೇಳಿದ್ದಾರೆ. ಮಣಿಪಾಲದ ಖಾಸಗಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಉಷಾ ಅಸುನೀಗಿದ್ದಾರೆ. ಕಳೆದ ಮೂರು ದಿನಗಳಿಂದ ಈ ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಾರ್ಮಲ್ ಹೆರಿಗೆ ಸಾಧ್ಯವಿಲ್ಲ ಎಂದಾದರೆ ಸಿಸೇರಿಯನ್ ಮಾಡಬಹುದಿತ್ತು. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಷ್ಟ ಎಂದು ಮೊದಲೇ ತಿಳಿಸಿದ್ದರೆ ಮಣಿಪಾಲಕ್ಕೆ ಕೊಂಡೊಯುತ್ತಿದ್ದೆವು. ಏನನ್ನೂ ಮಾಡದೆ ಇದೀಗ ಶವ ಮನೆಗೆ ಕೊಂಡೊಯ್ಯಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಣಂತಿಯ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಮತ್ತು ಗ್ರಾಮಸ್ಥರು ಆಸ್ಪತ್ರೆ ಆವರಣದಲ್ಲಿ ಸುದೀರ್ಘಕಾಲ ಪ್ರತಿಭಟನೆ ನಡೆಸಿದ್ದಾರೆ. ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಜಿಲ್ಲಾ ಸರ್ಜನ್ ಹಾಗೂ ಹಿರಿಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಹೆರಿಗೆಯಾದ ಬಳಿಕ ಮಹಿಳೆಯಲ್ಲಿ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಕೂಡಲೇ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.