ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸೇವಾ ಟ್ರಸ್ಟ್ ನ ಶ್ರಮಿಕ ಸದಸ್ಯರು ವಿಭಿನ್ನವಾದ ಶೈಲಿಯಲ್ಲಿ ಆಚರಿಸಿದರು.
ಎಂದಿನಂತೆ ಸೇವಾ ಕಾರ್ಯಕ್ಕೆ ಜಿಲ್ಲೆಯಲ್ಲಿ ಖ್ಯಾತಿಯನ್ನು ಪಡೆದಿರುವ ಸಂತೋಷ್ ಕುಮಾರ್ ಬೈರಂಪಳ್ಳಿಯವರ ನೇತೃತ್ವದ ಈ ಶ್ರಮಿಕರ ತರುಣರ ತಂಡ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದೆ. ತಂಡದ ಸರ್ವ ಸದಸ್ಯರ ಸಹಕಾರದೊಂದಿಗೆ ಉಡುಪಿಯ ಬುದ್ಧಿಮಾಂದ್ಯ ವಿಶೇಷ ಮಕ್ಕಳ ಆಶ್ರಯಧಾಮ ಆಶಾ ನಿಲಯದಲ್ಲಿ ದೇವರ ಮಕ್ಕಳ ಒಡಗೂಡಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದರು.
ಇದರೊಂದಿಗೆ ರಕ್ಷೆಯ ವಚನ ನೀಡಿ ಮಕ್ಕಳೊಂದಿಗೆ ಸರ್ವಸದಸ್ಯರು ರಕ್ಷಾಬಂಧನದ ಹಬ್ಬವನ್ನು ಆಚರಿಸಿ ಮಕ್ಕಳ ಪ್ರೀತಿಗೆ ಪಾತ್ರರಾದರು, ವಿವಿಧ ಸಿಹಿ ತಿಂಡಿಗಳನ್ನು ಹಂಚಿ, ಮಕ್ಕಳಿಗೆ ತ್ರಿವರ್ಣ ಧ್ವಜವನ್ನು ನೀಡಿ ದೇಶಪ್ರೇಮದ ಹಾಡುಗಳನ್ನು ಅವರೊಂದಿಗೆ ಹಾಡಿ, ನೃತ್ಯಗಳನ್ನು ಮಾಡಿ ಮಕ್ಕಳನ್ನು ಮನರಂಜಿಸಿದರು. ನಂತರ ಶ್ರಮಿಕರು ತಯಾರಿಸಿದ ವಿಶೇಷ ಭೋಜನವನ್ನು ಎಲ್ಲ ಮಕ್ಕಳಿಗೆ, ಸಿಬ್ಬಂದಿವರ್ಗಕ್ಕೆ ಉಣಬಡಿಸಿ ಸರ್ವಸದಸ್ಯರು ಅವರೊಂದಿಗೆ ಭೋಜನವನ್ನು ಮಾಡುತ್ತಾ ಸುವರ್ಣ ಕ್ಷಣಗಳನ್ನು ಕಳೆದರು.
ವಿಶೇಷವಾಗಿ ಋತುಮತಿಯಾದ ಬುದ್ದಿಮಾಂದ್ಯ ಅನೇಕ ಹೆಣ್ಣು ಮಕ್ಕಳಿದ್ದು ಋತುಚಕ್ರದ ದಿನಗಳಲ್ಲಿ ಅವರಿಗೆ ತೊಂದರೆಗಳು ಉಂಟಾದದನ್ನು ಕಂಡು ಸಂಸ್ಥಾಪಕರಾದ ಸಂತೋಷ್ ಕುಮಾರ್ ಬೈರಂಪಳ್ಳಿ ಅವರ ಆಶಯದಂತೆ ಮಕ್ಕಳಿಗೆ ಸ್ವಚ್ಛತೆಯೊಂದಿಗೆ ಇನ್ ಫೆಕ್ಷನ್ ನಿಂದ ಮುಕ್ತಿ ನೀಡಲು ಮತ್ತು ಚರ್ಮದ ಸೋಂಕುಗಳಿಂದ ಅವರನ್ನು ಸಂರಕ್ಷಿಸಲು ಒಂದು ವರ್ಷಕ್ಕೆ ಬೇಕಾಗುವ ಉತ್ತಮ ಗುಣಮಟ್ಟದ ಸಾಫ್ಟ್ ಸ್ಯಾನಿಟರಿ ಪ್ಯಾಡ್ ಗಳನ್ನು ಟ್ರಸ್ಟ್ ವತಿಯಿಂದ ಹಾಗೂ ದಾನಿಗಳಾದ ಚಂದ್ರಶೇಖರ ಅಡಿಗ (ರೇಮಂಡ್ಸ್), ಉದಿತ್ ಕುಮಾರ್ (ಬ್ಯಾಂಕ್ ಆಫ್ ಬರೋಡ), ಮತ್ತು ಸಂಸ್ಥಾಪಕರ ನೆರವಿನಿಂದ ಆಶಾನಿಲಯದ ಮುಖ್ಯಸ್ಥರಿಗೆ ನೀಡಿದರು. ಈ ಕಾರ್ಯಕ್ರಮವು ಶ್ರಮಿಕ ತರುಣರ ತಂಡದ ಗೌರವಾಧ್ಯಕ್ಷರಾದ ಪ್ರಕಾಶ್ ಕುಲಾಲ್, ಅಧ್ಯಕ್ಷರಾದ ರಘುನಾಥ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷರಾದ ಸಂಪಾವತಿ ಮತ್ತು ಸರ್ವಸದಸ್ಯರುಗಳ ಉಪಸ್ಥಿತಿ ಹಾಗೂ ಸಹಕಾರಗಳೊಂದಿಗೆ ಸಂಪನ್ನಗೊಂಡಿತು.