ಉಡುಪಿ: ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಗುಳುಂ ಮಾಡುವುದು ತಿಳಿದೇ ಇದೆ. ಇಲ್ಲೊಬ್ಬ ಸರ್ಕಾರಿ ಅಧಿಕಾರಿಯೇ ಜಾಗ ಕಬಳಿಸಿ ಮನೆ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದೆ. ತಹಶೀಲ್ದಾರ್ ಕಟ್ಟಡ ತೆರವುಗೊಳಿಸಲು ಆದೇಶ ಮಾಡಿದ್ದನ್ನು ಕಡೆಗಣಿಸಿ ಕಾಮಗಾರಿಯನ್ನು ಮುಂದುವರಿಸಿದ್ದಾರೆ. ಸದ್ಯ ಇದರ ವಿಚಾರಣೆ ನಡೆಯುತ್ತಿದ್ದರೂ ಮನೆ ನಿರ್ಮಾಣ ಕಾರ್ಯ ನಿಲ್ಲಿಸಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ರಿ ಮತ್ತು ಮುದ್ರಾಡಿ ಗ್ರಾಮ ಪಂಚಾಯತ್ ಪಿಡಿಓ ಸದಾಶಿವ ಸೇರ್ವೆಗಾರ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದಾನೆ. ಲೋಕಾಯುಕ್ತರ ಮಾರ್ಗದರ್ಶನದಲ್ಲಿ ಉಡುಪಿ ತಹಶೀಲ್ದಾರ್ ಶೀಘ್ರವಾಗಿ ಅಕ್ರಮ ಕಟ್ಟಡ ತೆರವುಗೊಳಿಸಲು ಆದೇಶಿಸಿದ್ದಾರೆ. ಇದರ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಈತನಿಗೆ ಆದೇಶ ಬಂದರು ಇದಕ್ಕೆಲ್ಲ ಡೋಂಟ್ ಕ್ಯಾರ್ ಎನ್ನುತ್ತಾ ಆತನ ಮನೆ ನಿರ್ಮಾಣ ಕೆಲಸ ನಡೆಸುತ್ತಿದ್ದಾನೆ.
ಘಟನೆ ವಿವರ:
ಹೆಬ್ರಿ ಮತ್ತು ಮುದ್ರಾಡಿ ಗ್ರಾಮಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸದಾಶಿವ ಸೇರ್ವೆಗಾರ ಮತ್ತು ಇವರ ಅಣ್ಣ ಪದ್ಮನಾಭ ಸೇರ್ವೆಗಾರ, ಸುರೇಶ್ ಸೇರ್ವಗಾರ ಇವರು ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದು, ಈ ಕಟ್ಟಡ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವಂತೆ ದೂರು ನೀಡಿರುತ್ತಾರೆ.
ಇದಕ್ಕೆ ಸಂಬಂಧಿಸಿ ದಿನಾಂಕ:17-05-2022ರಂದು ಗ್ರಾಮಕರಣಿಕರೊಂದಿಗೆ ಖುದ್ದಾಗಿ ಕಟ್ಟಡ ಪರಿಶೀಲನೆಯನ್ನು ಮಾಡಿದ್ದು, ಪರ್ಡೂರು ಗ್ರಾಮದ ಸ.ನಂ 296/ರ ಸರಕಾರಿ ಜಮೀನಿನಲ್ಲಿ ಕಟ್ಟಡ ಕಾಮಗಾರಿ ಆಗುತ್ತಿರುವುದು ಕಂಡುಬಂದಿದೆ. ಗ್ರಾಮಕರಣಿಕರು ಈಗಾಗಲೇ ಅವರಿಗೆ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ಹೇಳಿದ್ದರೂ ಕೂಡಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಭೂಕಬಳಿಕ ವಿಷಯದ ವಿಶೇಷ ನ್ಯಾಯಾಲಯದಲ್ಲಿ ಒತ್ತುವರಿ ಪ್ರಕರಣವನ್ನು ದಾಖಲಾಗಿದೆ. ಈ ವಿಚಾರದ ಬಗ್ಗೆ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿದ್ದು, ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದರೂ ಕೂಡಾ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟುತ್ತಿರುವ ಕಟ್ಟಡ ಕಾಮಗಾರಿಯನ್ನು ಮುಂದುವರಿಸಿದ್ದಾರೆ.