ಉಡುಪಿ: ಬೆಳ್ಳಂಬೆಳಗ್ಗೆ ಉಡುಪಿಯ ಜನರನ್ನು ಬೆಚ್ಚಿ ಬೀಳಿಸಿದ ಸುಟ್ಟ ಕಾರಿನಲ್ಲಿ ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.
ಕಾರಿನಲ್ಲಿ ಸುಟ್ಟು ಕರಕಲಾದ ಜೋಡಿಯ ಮಾಹಿತಿ ಲಭ್ಯವಾಗಿದೆ. ಮೃತರನ್ನು ಯಶವಂತ್ ಮತ್ತು ಜ್ಯೋತಿ ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರಿನ ಆರ್.ಟಿ.ನಗರದವರು ಎಂದು ತಿಳಿದುಬಂದಿದೆ.ಜ್ಯೋತಿ ಹಾಗೂ ಯಶವಂತ್ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರಿಬ್ಬರು ಕಳೆದು ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ಮೃತರು ನಿನ್ನೆ (ಮೇ 21) ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರು ಬಾಡಿಗೆ ಪಡೆದಿದ್ದರು. ಕಾರು ಬಾಡಿಗೆ ಪಡೆದು ಉಡುಪಿಗೆ ಬಂದಿದ್ದರು. ಹೀಗೆ ಬಂದವರು ಕಾರಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜ್ಯೋತಿ(23) ತಾಯಿ ನೀಡಿದ ದೂರು ಆಧರಿಸಿ ಪೊಲೀಸರು ದೂರು ದಾಖಲಿಸಿದ್ದರು. ಇಂಟರ್ವ್ಯೂ ಇದೆ ಅಂತ ಹೇಳಿ ಮೇ 18ರಂದು ಬೆಳಿಗ್ಗೆ 11.30ಕ್ಕೆ ಮನೆಯಿಂದ ಆಚೆ ಹೋದ ಜ್ಯೋತಿ ವಾಪಾಸ್ ಬಂದಿಲ್ಲ ಅಂತಾ ಆಕೆಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಳು. ಜ್ಯೋತಿ ಹೆಬ್ಬಾಳ ಚೋಳನಾಯಕನಹಳ್ಳಿ ನಿವಾಸಿ.
ಇನ್ನೊಂದೆಡೆ ಯಶವಂತ್ ಯಾದವ್ (23) ತಂದೆಯಿಂದಲೂ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಯಶವಂತ್ ಕೂಡ ಮೇ 18ರಂದು ಮನೆಯಿಂದ ಹೋಗಿದ್ದ. ಟ್ಯಾಲಿ ಕ್ಲಾಸ್ ಇದೆ ಅಂತಾ ಹೇಳಿ ಮಧ್ಯಾಹ್ನ 12 ಗಂಟೆಗೆ ಹೊರ ಹೋಗಿದ್ದ. ಬೈಕ್ನಲ್ಲಿ ಹೋಗಿದ್ದ ಮಗನನ್ನು ಪತ್ತೆ ಹಚ್ಚುವಂತೆ ಯಶವಂತ್ ತಂದೆ ಪಟೇಲ್ ಮುನಿಯಪ್ಪ ದೂರು ದಾಖಲಿಸಿದ್ದರು.
ಕಳೆದ 3 ದಿನಗಳ ಹಿಂದೆ ಯಶವಂತ್ ಮತ್ತು ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ, ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.