ಬಂಟ್ವಾಳ: ಸಾಲ ನೀಡಿದ ಹಣವನ್ನು ವಾಪಸ್ಸು ನೀಡದೆ ಸತಾಯಿಸಿ ಆ ಬಳಿಕ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಘಟನೆ ಬಂಟ್ವಾಳದ ಸಜೀಪ ಮುನ್ನೂರು ಬಳಿ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಣೆಮಂಗಳೂರಿನ ಜೈನರಪೇಟೆ ನಿವಾಸಿ ಆಲಿಮಮ್ಮ, ಹಫೀಝಾ ಫಾತಿಮಾ ಮತ್ತು ಹಾಫಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ..?
ಸಜೀಪ ಮುನ್ನೂರು ಗ್ರಾಮದ ನಿವಾಸಿ ಝೀನತ್ ಅವರು ಪಾಣೆಮಂಗಳೂರಿನ ಆಲಿಮಮ್ಮ ಎಂಬವರಿಗೆ ಆರ್ಥಿಕ ಸಹಾಯವನ್ನು ಸಾಲದ ರೂಪದಲ್ಲಿ ಕೇಳಿದಾಗ 2020 ನೇ ಜೂನ್ ನಿಂದ 2021 ನೇ ಡಿಸೆಂಬರ್ ತಿಂಗಳವರೆಗೆ ಐದು ಕಂತುಗಳಲ್ಲಿ 7.55,000/- ಹಣವನ್ನು ನೀಡಿರುತ್ತಾರೆ. ಮೊದಲ ಕಂತಿನ ಹಣವನ್ನು ಬಿಟ್ಟು ಉಳಿದ ಕಂತಿನ ಹಣಕ್ಕೆ ಬಿಸಿರೋಡಿನ ವಕೀಲರ ಮುಖಾಂತರ ಬೇರೆ ಬೇರೆ ದಿನಾಂಕದಂದು ಒಟ್ಟು 4 ಕರಾರು ಪತ್ರಗಳನ್ನು ಮಾಡಿ ಅದಕ್ಕೆ ಹಫೀಝಾ ಫಾತಿಮಾ ಮತ್ತು ಹಾಫಿಲ್ ಸಾಕ್ಷಿ ಸಹಿ ಹಾಕಿದ್ದಾರೆ. ನಂತರ ಹಣವನ್ನು ನೀಡದೆ ಸತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಮರುಪಾವತಿ ಮಾಡಿಕೊಡುವಂತೆ ಹೇಳಿದಾಗ ಆಲಿಮಮ್ಮ ಕಾರ್ಪೋರೇಶನ್ ಬ್ಯಾಂಕ್ನ 3 ಚೆಕ್ ನೀಡಿದ್ದಾರೆ. ಬ್ಯಾಂಕಿಗೆ ಹೋದಾಗ ಕಾರ್ಪೋರೇಶನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಜೊತೆ ವಿಲೀನವಾಗಿರುವುದರಿಂದ ಚೆಕ್ಕುಗಳನ್ನು ಬದಲಾಯಿಸಿ ತನ್ನಿ ಎಂದಿದ್ದಾರೆ. ಪುನಃ ಹಣ ವಾಪಾಸು ಕೇಳಿದಾಗ
ಎಸ್.ಬಿ.ಐ ಬ್ಯಾಂಕಿಗೆ ಚೆಕ್ ನೀಡಿದ್ದಾರೆ. ಇಲ್ಲೂ ಸಹ ಖತರ್ನಾಕ್ ಬುದ್ಧಿ ತೋರಿಸಿದ್ದು ಚೆಕ್ ಜಮೆ ಆಗುವ ಮೊದಲೇ ಬ್ಯಾಂಕಿಗೆ ತೆರಳಿ Stop Payment ನಿರ್ದೇಶನ ಮಾಡಿದ್ದಾರೆ. ಇದರಿಂದ ಚೆಕ್ ವಾಪಸ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅವಾಚ್ಯ ಶಬ್ಧಗಳಿಂದ ನಿಂದನೆ..!
ಸಾಲ ಪಡೆದ ಮಹಿಳೆಯಿಂದ ಹಣ ವಾಪಸ್ ಕೇಳಿದಾಗ ನಿನಗೆ ಹೇಗೋ ಗಂಡ ಇಲ್ಲ. ಯಾರೊಡನೆಯಾದರೂ ಮಲಗಿ ಹಣ ಮಾಡು ಎಂದು ಇತ್ಯಾದಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹೈಡ್ರಾಮಾ ಮಾಡೋದ್ರಲ್ಲಿ ಆಲಿಮಮ್ಮ ಎತ್ತಿದ ಕೈ..!
ಆಲಿಮಮ್ಮಳ ಮುಖವಾಡ ಒಂದೆರಡಲ್ಲ. ಈಕೆ ಈ ಹಿಂದೆಯೂ ಇಂತಹದ್ದೇ ಖತರ್ನಾಕ್ ಬುದ್ಧಿ ತೋರಿಸಿದ್ದಳು. ಸ್ವಂತ ಮಗಳ ಒಡವೆಯನ್ನೇ ಕದ್ದಿದ್ದಳು. 4 ವರ್ಷಗಳ ಹಿಂದೆ ಆಲಿಮಮ್ಮ ತನ್ನ ಮಗಳ ಆಭರಣ ಕದ್ದು ಯಾರೋ ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರು ನೀಡಿ ಹೈಡ್ರಾಮ ಸೃಷ್ಟಿಸಿದ್ದಳು. ಆದ್ರೆ ಪೊಲೀಸರ ತನಿಖೆಯಲ್ಲಿ ಆಲಿಮಮ್ಮಳ ಅಸಲಿ ಮುಖವಾಡ ಕಳಚಿದೆ. ಆಕೆ ಕದ್ದು ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ.