ಉಡುಪಿ: ಕಿಡಿಗೇಡಿಗಳ ಕುತಂತ್ರಕ್ಕೆ ಬಲಿಯಾಗಿ ಪೇಸ್ ಬುಕ್ ಪೋಸ್ಟ್ ಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾದಲ್ಲಿ ಬಂಧನಕ್ಕೆ ಒಳಗಾಗಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಬೀಜಾಡಿ ಗ್ರಾಮದ ನಿವಾಸಿ ಹರೀಶ್ ಬಂಗೇರ ಎಸ್. ಅವರು ಬಂಧಮುಕ್ತರಾಗಿ ಸದ್ಯದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ.
ಈ ಬಗ್ಗೆ ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಮಾಹಿತಿ ನೀಡಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಅವರು ಸೌದಿ ಅರೇಬಿಯಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತಿದ್ದರು. ಹರೀಶ್ ಬಂಗೇರ ಅವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದ್ದು, ಅವರು ಭಾರತ ಪ್ರಯಾಣ ಮುಂದುವರಿಸಲಿದ್ದಾರೆ. ಭಾರತ ವಿದೇಶಾಂಗ ಇಲಾಖೆ ಅವರ ಬಿಡುಗಡೆಗಾಗಿ ಶ್ರಮಿಸಿದ್ದು ಅವರಿಗೆ ಸತೀಶ್ ಕುಮಾರ್ ಬಜಾಲ್ ಧನ್ಯವಾದ ತಿಳಿಸಿದ್ದಾರೆ. ಹರೀಶ್ ಬಂಗೇರಾ ಅವರ ವಿಮಾನ ಪ್ರಯಾಣದ ವೆಚ್ಚವನ್ನು ಮಂಗಳೂರು ಅಸೋಸಿಯೇಷನ್ ಭರಿಸಿದೆ.
ಸೌದಿಯ ಮನಿಕಂಠನ್, ಮಹಮ್ಮದ್ ಶರೀಫ್ ದಮ್ಮಾಮ್, ಪ್ರಸನ್ನ ಭಟ್ ರಿಯಾದ್, ಪ್ರಕಾಶ್ ಪೂಜಾರಿ ರಿಯಾದ್, ಕಮಾಲಾಕ್ಷ ಅಡ್ಯಾರ್ ಅಲ್, ಕೋಬರ್, ಜೋಯಿಸನ್ ಅಲ್ ಅಸಾ ಹಾಗೂ ಬಂಗೇರ ಅವರ ಬಿಡುಗಡೆಗೆ ಪ್ರಾರ್ಥಿಸಿದ ಮತ್ತು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸತೀಶ್ ಬಜಾಲ್ ಧನ್ಯವಾದ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಈಗಾಗಲೇ ಉಡುಪಿ ಪೊಲೀಸರು ಬಂಧಿಸಿದ್ದು, ಆರೋಪಿಗಳು ಈಗಾಗಲೇ ಜಾಮೀನು ಪಡೆದು ಬಿಡುಗಡೆಯಾಗಿದ್ಧಾರೆ.
2019 ರ ಡಿಸೆಂಬರ್ ತಿಂಗಳಿನಲ್ಲಿ ಕೋಟೇಶ್ವರದ ಗೋಪಾಡಿ ಗ್ರಾಮದ ಹರೀಶ್ ಬಂಗೇರಾ ಎಸ್. ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಲಾಗಿತ್ತು. ಈ ಖಾತೆಯಲ್ಲಿ ಸೌದಿ ಅರೇಬಿಯಾ ದೊರೆ ವಿರುದ್ಧ ಫೋಸ್ಟ್ ಮಾಡಿದ್ದು, ಈ ಪೋಸ್ಟ್ ಬಂಗೇರಾ ಎಂದೇ ಭಾವಿಸಿ ಸೌದಿ ಪೊಲೀಸರು ಅವರನ್ನು ಬಂಧಿಸಿದ್ದರು. ಆದರೇ ಈ ಪ್ರಕರಣದ ನೈಜ್ಯತೆಯ ಅರಿವಿದ್ದ ಹರೀಶ್ ಬಂಗೇರರವರ ಪತ್ನಿ ತನ್ನ ಪತಿಯ ಫೇಕ್ ಅಕೌಂಟ್ ಸೃಷ್ಟಿಸಿ ಅದರ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಿ ಕುತಂತ್ರದಿಂದ ಸಿಲುಕಿಸಲಾಗಿದೆ ಎಂದು ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ದೂರಿನ ವರದಿಯನ್ನು ಸೌದಿ ಪೊಲೀಸರಿಗೆ ಉಡುಪಿ ಪೊಲೀಸರು ರವಾನಿಸಿದ್ದರು.
ಉಡುಪಿ ಸೆನ್ ಪೊಲೀಸರು ನಕಲಿ ಖಾತೆ ಕ್ರಿಯೇಟ್ ಆಗಿರುವ ಬಗ್ಗೆ ತನಿಖೆ ನಡೆಸಿದಾಗ ಮೂಡುಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಹಾಗೂ ಅಬ್ದುಲ್ ತುವೇಸ್ ಈ ಕೃತ್ಯದ ಹಿಂದಿರುವುದು ಬೆಳಕಿಗೆ ಬಂದಿದೆ. 2020ರ ಜೂನ್ ತಿಂಗಳಲ್ಲಿ ಸಹೋದರರಿಬ್ಬರನ್ನು ಬಂಧಿಸಿ ಅಕ್ಟೋಬರ್ ನಲ್ಲಿ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.