ಚುನಾವಣೆ ಸಂದರ್ಭದಲ್ಲಿ ಧಾರ್ಮಿಕ ವಿಚಾರಗಳು, ಧಾರ್ಮಿಕ ಕ್ಷೇತ್ರಗಳು ಮುನ್ನೆಲೆಗೆ ಬರೋದು ಕಾಮನ್. ವಿಶೇಷ ಅಂದ್ರೆ, ಮತದಾರರ ಭಾವನೆಗಳಿಗೆ ಹತ್ತಿರವಾಗುವ ಅಂತಹ ಸೆಂಟಿಮೆಂಟ್ಸ್ ಚುನಾವಣೆಯ ದಿಕ್ಕನ್ನೇ ಬದಲಿಸಿಬಿಡುತ್ವೆ. ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿ ಬಿಡುತ್ವೆ. ಇದು ಕೆಲ ಪಕ್ಷಗಳಿಗೆ ವರವಾದ್ರೆ, ಇನ್ನು ಕೆಲವು ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತೆ. ಬಟ್, ಅಂತಹ ಅಸ್ತ್ರವನ್ನ ಯಾವ ಟೈಮಲ್ಲಿ ನೋಡಿ ಬಿಡಬೇಕು ಅನ್ನೋ ವಿಚಾರದಲ್ಲಿ ಬಿಜೆಪಿಯ ಚುನಾವಣಾ ಚಾಣಕ್ಯ ನಿಜಕ್ಕೂ ಪಂಟರ್ ಅನ್ನೋದು ಮತ್ತೆ ಸಾಬೀತಾಗಿದೆ..
ಉತ್ತರ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದೇ ತಡ, ಪ್ರಬಲ ರಾಜಕೀಯ ಪಕ್ಷಗಳು ದೊಡ್ಡ ರಾಜ್ಯದ ಗದ್ದುಗೆ ಹಿಡಿಯಲು ಇನ್ನಿಲ್ಲದ ಸರ್ಕಸ್ ಮಾಡ್ತಿವೆ. ಬಿಜೆಪಿ, ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ರಣತಂತ್ರದಲ್ಲಿ ನಿರತವಾಗಿವೆ. ಪಕ್ಷಗಳು ಉರುಳಿಸಿರೋ ಕೆಲವು ದಾಳ ವರ್ಕೌಟ್ ಆದ್ರೆ, ಇನ್ನೂ ಕೆಲವು ಕೆಲಸಕ್ಕೆ ಬರ್ತಿಲ್ಲ. ಅದ್ರಲ್ಲೂ ಉತ್ತರ ಪ್ರದೇಶ ಸಮರ, ಬಿಜೆಪಿಗೆ ಈ ಬಾರಿ ಕೊಂಚ ಕಷ್ಟವಾಗ್ತಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಅದಕ್ಕಾಗಿಯೇ ಮತಗಳ ರಣಬೇಟೆಗಾರ ಅಂತ ಕರೆಯಿಸಿಕೊಳ್ಳುವ ಬಿಜೆಪಿಯ ಚಾಣಕ್ಯ ಉತ್ತರದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯಾವಾಗ ಅಮಿತ್ ಶಾ ಸಮರ ಕಣಕ್ಕೆ ಇಳಿದ್ರೋ ಆಗಿನಿಂದ ಯುಪಿಯಲ್ಲಿ ಹೊಸ ಗಾಳಿಯೇ ಬೀಸಲಾರಂಭಿಸಿದೆ. ಪಕ್ಕಾ ಪ್ಲಾನ್ ಮಾಡಿ ಕಣಕ್ಕೆ ಇಳಿದಿರೋ ಅಮಿಶ್ ಶಾ ಚುನಾವಣಾ ದಿಕ್ಕನ್ನೇ ಬದಲಿಸುವ ಸೂಚನೆ ನೀಡುತ್ತಿದ್ದಾರೆ.
ಉತ್ತರ ಪ್ರದೇಶದ ಚುನಾವಣೆ ದೇಶದ ಭವಿಷ್ಯವನ್ನೇ ನಿರ್ಧಾರ ಮಾಡೋ ಚುನಾವಣೆ ಅನ್ನೋದನ್ನ ಜಸ್ಟ್ ಒಂದು ದಿನದ ಹಿಂದೆಯಷ್ಟೇ ಅಮಿತ್ ಶಾ ಹೇಳಿದ್ದಾರೆ. ಬಟ್, ಇಲ್ಲಿ ಅಮಿತ್ ಶಾ ಆ ಮಾತು ಹೇಳಿದ್ರು ಅನ್ನೋದಕ್ಕಿಂತ ಅವರು ಹೇಳಿದ್ದು ಯಾವ ಸ್ಥಳದಿಂದ ಅನ್ನೋದೇ ಹೈಲೈಟ್.
ಉತ್ತರ ಪ್ರದೇಶಲ್ಲಿರೋ ಪ್ರಮುಖ ಪುಣ್ಯ ಕ್ಷೇತ್ರಗಳ ಸಾಲಿನಲ್ಲಿ ಮಥುರಾವೂ ಒಂದು. ಇಲ್ಲಿಯೇ ಭಗವಾನ್ ಶ್ರೀಕೃಷ್ಣನ ಜನ್ಮಪಡೆದಿದ್ದಾನೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡ್ತಾರೆ. ಶ್ರೀಕೃಷ್ಣನ ಆಶೀರ್ವಾದ ಪಡೆದು ಪುನೀತಾರಾಗ್ತಾರೆ. ಬಿಜೆಪಿಯ ಚಾಣಕ್ಯ ಅಂತಲೇ ಕರೆಸಿಕೊಳ್ಳುವ ಅಮಿತ್ ಶಾ ಇದು ಭವ್ಯ ಭಾರತದ ಭವಿಷ್ಯ ನಿರ್ಧರಿಸೋ ಚುನಾವಣೆ ಅಂದಿದ್ದು ಇದೇ ಭಗವಾನ್ ಶ್ರೀಕ್ಷೇತ್ರನ ಜನ್ಮಸ್ಥಳದಲ್ಲಿ ನಿಂತುಕೊಂಡು.
ಮಥುರಾದ ಬಂಕೆ ಬಿಹಾರಿ ದೇಗುಲಕ್ಕೆ ಶಾ ಭೇಟಿ, ಪೂಜೆ
ಪೂಜೆಯ ಬಳಿಕ ಮತಯಾಚನೆ ಮಾಡಿದ ಚಾಣಕ್ಯ
ಚುನಾವಣೆಯ ದಿಕ್ಕನ್ನೇ ಬದಲಿಸೋ ಸಾಮರ್ಥ್ಯ ಇರೋ ವ್ಯಕ್ತಿಗಳು ಅಂದ್ರೆ ಒಂದು ಪ್ರಧಾನಿ ನರೇಂದ್ರ ಮೋದಿ, ಇನ್ನೊಂದು ಗೃಹ ಸಚಿವ ಅಮಿಶ್ ಶಾ…ಈ ಜೋಡೆತ್ತು ಅಖಾಡಕ್ಕೆ ಇಳಿಯಿತು ಅಂದ್ರೆ ಮುಗೀತು. ವಿರೋಧ ಪಕ್ಷಗಳು ಧೂಳಿಪಟ ಅಂಥಲೇ ಅರ್ಥ. ಅದು, ಈಗಾಗಲೇ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಸಾಬೀತು ಆಗಿದೆ. ಅದೇ ರೀತಿ ಫೆಬ್ರವರಿ 10ರಿಂದ ಆರಂಭವಾಗಲಿರೋ ಉತ್ತರ ಪ್ರದೇಶದ ಚುನಾವಣೆಯಲ್ಲೂ ಈ ಜೋಡಿ ಕಮಾಲ್ ಮಾಡೋಕೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ನರೇಂದ್ರ ಮೋದಿ ಕಾಶಿ ಕಾರಿಡಾರ್ ಯೋಜನೆ ಸೇರಿದಂತೆ ಹಲವಾರು ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಭದ್ರ ಅಡಿಪಾಯ ಹಾಕಿದ್ದಾರೆ. ಇನ್ನು, ಮನೆ ಮನೆ ಪ್ರಚಾರಕ್ಕೆ ಧುಮುಕಿರೋ ಅಮಿತ್ ಶಾ ಭರ್ಜರಿ ಪ್ಲಾನ್ ಮಾಡಿದ್ದಾರೆ.
ಹೌದು, ಅಮಿತ್ ಶಾ ಸುಮ್ಮನೇ ಕಂಡ ಕಂಡಲ್ಲಿ ಪ್ರಚಾರಕ್ಕೆ ಇಳಿಯುತ್ತಿಲ್ಲ. ಜನರ ಭಾವನೆಗಳ ಜೊತೆಗೆ ಬೇರೆತಿರೋ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಮತಬೇಟೆಗೆ ಮುಂದಾಗಿದ್ದಾರೆ. ಕಳೆದ ವಾರ ಕೈರಾನಾದಲ್ಲಿ ಮನೆ ಮನೆ ಪ್ರಚಾರ ಮಾಡಿ ಅಮಿತ್ ಶಾ ಗಮನಸೆಳೆದಿದ್ರು. ಎಸ್ಪಿ ಸರ್ಕಾರದ ವೇಳೆ ಕೈರಾನಾದಲ್ಲಿ ಗುಂಡಾಗಿರಿ ವಿಪರೀತವಾಗಿತ್ತು. ಆಗ ಅಲ್ಲಿದ್ದ ಸಾವಿರಾರು ಹಿಂದೂ ಕುಟುಂಬಗಳು ಆ ಪ್ರದೇಶವನ್ನು ತೊರೆದು ಹೋಗಿದ್ದರು. ಆದ್ರೆ, ಬಿಜೆಪಿ ಸರ್ಕಾರ ಬಂದ ಮೇಲೆ ಬಿಟ್ಟು ಹೋದ ಕುಟುಂಬಗಳನ್ನು ಕರೆತಂದು ಪುನರ್ವಸತಿ ಕಲ್ಪಿಸಲಾಗಿತ್ತು. ಹೀಗಾಗಿ ಕೈರಾನಾ ಹಿಂದೂಗಳಿಗೆ ಒಂದು ರೀತಿಯಲ್ಲಿ ಭಾವನಾತ್ಮಕ ಟಚ್ ಇರೋ ಕ್ಷೇತ್ರವಾಗಿದ್ದು. ಇದೀಗ ಶಾ ಶ್ರೀಕೃಷ್ಣನ ಜನ್ಮಭೂಮಿ ಮಥುರಾಗೆ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ, ಅಲ್ಲಿಯ ಬಂಕೆ ಬಿಹಾರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಶಾ ‘ಮಥುರಾ’ ತಂತ್ರ
ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಇವೆ 5 ವಿಧಾನಸಭಾ ಕ್ಷೇತ್ರಗಳು
2017ರ ಚುನಾವಣೆಯಲ್ಲಿ ಬಿಜೆಪಿಗೆ 4ರಲ್ಲಿ ಗೆಲುವು, 1 ಬಿಎಸ್ಪಿಗೆ
ಮಥುರಾ ಕ್ಷೇತ್ರಲ್ಲಿ ಬಿಜೆಪಿ ಅತೀ ಪ್ರಬಲ, ಆದರೂ ಅಮಿತ್ ಶಾ ಭೇಟಿ
ಮತದಾರರನ್ನ ಭಾವನಾತ್ಮಕವಾಗಿಯೂ ಸೆಳೆಯುವ ಪುಣ್ಯಕ್ಷೇತ್ರ
ಕಾಶಿ, ಅಯೋಧ್ಯೆ ಕ್ಷೇತ್ರದ ವಿವಾದ ಅಂತ್ಯ, ಮಥುರಾ ವಿವಾದ ಜೀವಂತ
ಗೇಮ್ ಪ್ಲಾನ್ ರೂಪಿಸಿ ಪ್ರಚಾರ ನಡೆಸುತ್ತಿರೋ ಚುನಾವಣಾ ಚಾಣಕ್ಯ
ಬಿಜೆಪಿಯ ಮಥುರಾ ಪ್ಲಾನ್ ಏನು ಅನ್ನೋದನ್ನು ನೋಡುತ್ತಿದ್ರೆ ಹಲವಾರು ಅಂಶಗಳು ಕೇಳಿ ಬರ್ತಾ ಇವೆ. ಮಥುರಾ ಲೋಕಸಭಾ ಕ್ಷೇತ್ರ ಕೂಡ ಬಿಜೆಪಿ ವಶದಲ್ಲಿದೆ. ಇನ್ನು ಈ ಕ್ಷೇತ್ರದಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳು ಇವೆ. ಅದರಲ್ಲಿ 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ, 1 ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನು ಮಥುರ ವಿಧಾನಸಭೆಯಲ್ಲಿ 1.4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಶ್ರೀಕಾಂತ್ ಶರ್ಮಾ ವಿದ್ಯುತ್ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ನೋಡಿದ್ರೆ ಎಂಥವರಿಗಾದ್ರೂ ಮಥುರಾದಲ್ಲಿ ಬಿಜೆಪಿ ಫುಲ್ ಸ್ಟ್ರಾಂಗ್ ಅನ್ನೋದು ಗೊತ್ತಾಗುತ್ತೆ. ಆದ್ರೂ ಈ ಕ್ಷೇತ್ರಕ್ಕೆ ಅಮಿತ್ ಶಾ ಭೇಟಿ ಮಾಡಿ ಮತಯಾಚನೆ ಮಾಡಿದ್ದಾರೆ. ಯಾಕೆಂದ್ರೆ ಅಲ್ಲಿಯೇ ಇರೋದು ಮಾಸ್ಟರ್ ಪ್ಲಾನ್.
ಶ್ರೀಕೃಷ್ಣನ ಜನ್ಮಭೂಮಿಯಾಗಿರೋ ಮಥುರಾ ಜನರಿಗೆ ಭಾವನಾತ್ಮಕವಾಗಿ ಟಚ್ ಇರೋ ಕ್ಷೇತ್ರ. ಉತ್ತರ ಪ್ರದೇಶದಲ್ಲಿಯೇ ಇರೋ ಕಾಶಿ, ಅಯ್ಯೋಧ್ಯೆಯ ವಿವಾದ ಈಗಾಗಲೇ ಅಂತ್ಯವಾಗಿದೆ. ಆದ್ರೆ, ಮಥುರಾದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿರೋ ಮಸೀಯದಿಯನ್ನು ತೆರವು ಮಾಡಬೇಕು ಅನ್ನೋ ವಿವಾದ ಇನ್ನೂ ಜೀವಂತವಾಗಿದೆ. ಇದೇ ಕಾರಣಕ್ಕೆ ಶಾ ಅಲ್ಲಿ ಬಿಜೆಪಿ ಸ್ಟ್ರಾಂಗ್ ಇದ್ರೂ ಗೇಮ್ ಪ್ಲಾನ್ ರೂಪಿಸಿಯೇ ಭೇಟಿ ನೀಡಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಮಥುರಾ ಅನ್ನೋದು ಕೇವಲ ಧಾರ್ಮಿಕ ಕ್ಷೇತ್ರವಲ್ಲ. ಅಲ್ಲಿ ವಿವಾದವೂ ಇದೆ. ದೇವಸ್ಥಾನದ ಪ್ರಾಂಗಣದಲ್ಲಿಯೇ ಮೋಘಲ್ ದೊರೆ ಔರಂಗಜೇಬನ ಕಾಲದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಈ ಮಸೀದಿಯನ್ನು ತೆರವು ಮಾಡಬೇಕು, ಶ್ರೀಕೃಷ್ಣನ ದರ್ಶನಕ್ಕೆ ಬರೋ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಅನ್ನೋದು ಹಿಂದೂಗಳ ಆಗ್ರಹ. ಈ ವಿಚಾರವಾಗಿಯೂ ಪರ ವಿರೋಧದ ವಾದಗಳು ನಡೀತಾನೆ ಇರುತ್ವೆ. ಹೀಗಾಗಿಯೇ, ಪ್ರತಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಶಿ, ಅಯೋಧ್ಯೆ ಹೇಗೆ ಸುದ್ದಿಯಾಗುತ್ತಿತ್ತೋ ಅದೇ ರೀತಿ ಮಥುರಾ ಕೂಡ ಸುದ್ದಿಯಾಗುತ್ತಿತ್ತು. ಈ ಬಾರಿ ಕಾಶಿ, ಅಯೋಧ್ಯೆಗಿಂತ ಮಥುರವಾಗೆ ಹೆಚ್ಚು ಸುದ್ದಿಯಾಗುತ್ತಿದೆ.
ಮಥುರಾ ಜೀರ್ಣೋದ್ಧಾರಕ್ಕೆ ಪಣ ಎಂದಿದ್ದ ಯೋಗಿ, ಮೌರ್ಯ
ಈ ಬಾರಿ ಚುನಾವಣೆಯಲ್ಲಿ ಶ್ರೀ ಕೃಷ್ಣನ ಪುಣ್ಯಕ್ಷೇತ್ರವೇ ಹೈಲೈಟ್
ಹೌದು.. ಈ ಬಾರಿ ಮಥುರಾವನ್ನೇ ಬಿಜೆಪಿ ಹೈಲೈಟ್ ಮಾಡ್ತಾ ಇದೇ ಅನ್ನೋದ್ರದಲ್ಲಿ ಯಾವುದೇ ಡೌಟ್ ಇಲ್ಲ. ಯಾಕೆಂದ್ರೆ, ಕಾಶಿ ಮತ್ತು ಅಯೋಧ್ಯೆ ವಿವಾದಗಳು ಈಗಾಗಲೇ ಅಂತ್ಯವಾಗಿವೆ. ಆ ಎರಡೂ ಪುಣ್ಯ ಕ್ಷೇತ್ರಗಳ ವಿಚಾರದಲ್ಲಿ ಭಕ್ತರಿಗೆ ಸಮಸ್ಯೆ ಬಗೆಹರಿದಿದೆ ಅನ್ನೋ ಸಂತೋಷವಿದೆ. ಆದ್ರೆ, ಮಥುರಾ ವಿಚಾರದಲ್ಲಿ ವಿವಾದ ಬಗೆಹರಿದಿಲ್ಲ ಅನ್ನೋ ನೋವು ಭಕ್ತರದಲ್ಲಿದೆ. ಶ್ರೀಕೃಷ್ಣನನ್ನು ಪುಜಿಸುವವರಲ್ಲಿದೆ. ಇದೇ ಕಾರಣಕ್ಕೆ ಬಿಜೆಪಿ ಈ ಬಾರಿ ಮಥುರಾವನ್ನು ಹೈಲೈಟ್ ಮಾಡ್ತಾ ಇದೆ ಎನ್ನಲಾಗಿದೆ. ಯೋಗಿ ಮುಖ್ಯಮಂತ್ರಿ ಆದ ಮೇಲೆ ಇಲ್ಲಿಗೆ 18 ಬಾರಿ ಭೇಟಿ ನೀಡಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಭೇಟಿ ನೀಡಿದವರು ಕಾಶಿ, ಅಯೋಧ್ಯೆಯ ನಂತರ ಮಥುರಾ ಜೀರ್ಣೋದ್ಧಾರಕ್ಕೆ ಪಣ ಅಂತಾ ಯೋಗಿ ಆದಿತ್ಯನಾಥ್ ಬಹಿರಂಗವಾಗಿಯೇ ಹೇಳಿದ್ದರು. ಇನ್ನು ಯುಪಿ ಉಪಮುಖ್ಯಮಂತ್ರಿಯಾಗಿರೋ ಕೇಶವ್ ಪ್ರಸಾದ್ ಮೌರ್ಯ ಕೂಡ ಅದೇ ಮಾತನ್ನು ಉಚ್ಛರಿಸಿದ್ದರು.
ಈ ಎಲ್ಲಾ ಬೆಳವಣಿಗೆ ನೋಡಿದ್ರೆ, ಅಮಿತ್ ಶಾ ಎಂಟ್ರಿಯಿಂದ ಚುನಾವಣೆಯ ದಿಕ್ಕೇ ಬದಲಾಗುವ ಸೂಚನೆ ಸಿಗ್ತಿದೆ. ಸೂಕ್ಷ್ಮ ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಂಡು, ಜನರಿಗೆ ಭಾವನಾತ್ಮಕವಾಗಿ ಹತ್ತಿರವಾಗಿರೋ ಕ್ಷೇತ್ರವನ್ನೇ ಸೆಲೆಕ್ಟ್ ಮಾಡಿ ಬಿಜೆಪಿ ದಾಳ ಉರುಳುಸುತ್ತಿದೆ. ವಿಶೇಷ ಅಂದ್ರೆ, ಈ ವಿಚಾರದಲ್ಲಿ ಬಿಜೆಪಿ ಪ್ರತಿಸ್ಪರ್ಧಿ ಪಕ್ಷಗಳು ಎಂಟ್ರಿ ಕೊಡಲು ಸಾಧ್ಯವಾಗುತ್ತಿಲ್ಲ. ಒಮ್ಮೆ ಎಂಟ್ರಿಯಾಗಿ ಹಿಂದುಗಳ ಪರವಾಗಿ ಮಾತನಾಡಿದ್ರೆ ಅಲ್ಪಸಂಖ್ಯಾತ ಮತ ಕೈತಪ್ಪಿ ಹೋಗುತ್ತವೆ ಅನ್ನೋ ಭಯ ಅವರಿಗಿದೆ. ಇನ್ನು, ಅಲ್ಪ ಸಂಖ್ಯಾತರ ಪರ ಮಾತನಾಡಿದ್ರೆ ಬಹುಸಂಖ್ಯಾತ ಹಿಂದೂ ಮತಗಳು ಕೈತಪ್ಪಿ ಹೋಗುತ್ತವೆ ಅನ್ನೋ ಭೀತಿಯೂ ಇದ್ದು, ಮತಗಳ ಕ್ರೂಡೀಕರಣಕ್ಕೆ ಒತ್ತು ನೀಡುತ್ತಿರೋ ಬಿಜೆಪಿಗೆ ವರವಾಗುತ್ತಿದೆ.
ಈ ಬಾರಿ ಉತ್ತರ ಅಖಾಡದಲ್ಲಿ ಬಿಜೆಪಿಗೆ ಸವಾಲು ಇದೇ ಅನ್ನೋ ವರದಿಗಳೇ ಬರ್ತಾ ಇದ್ವು. ಆದ್ರೆ, ಚುನಾವಣಾ ಚಾಣಕ್ಯ ಧಾರ್ಮಿಕ ಕ್ಷೇತ್ರವನ್ನೇ ಗಾಳವಾಗಿ ಉರುಳಿಸುತ್ತಿರೋದು ಪ್ರತಿಸ್ಪರ್ಧಿ ಪಕ್ಷಗಳಿಗೆ ಬಿಸಿ ತುಪ್ಪವಾಗುತ್ತಿದೆ. ಚುನಾವಣೆಯ ದಿಕ್ಕನ್ನೇ ಬದಲಿಸುವ ಸೂಚನೆ ನೀಡುತ್ತಿದೆ.