ಬೆಳಗಾವಿ: ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಬೆಳಗಾವಿಯ ಕೋಕಾ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಅದಿರು ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದ್ದು, 3 ಕೋಟಿ ಹಫ್ತಾ ನೀಡದಿದ್ದಕ್ಕೆ ಆರ್.ಎನ್. ನಾಯಕ್ರನ್ನು ಹತ್ಯೆ ಮಾಡಲಾಗಿತ್ತು. 2013ರ ಡಿಸೆಂಬರ್ 21ರಂದು ಉದ್ಯಮಿ ನಾಯಕ್ ಕೊಲೆಯಾಗಿತ್ತು. ಸುಪಾರಿ ನೀಡಿ ಕೊಲೆ ಮಾಡಿಸಿದ ಆರೋಪ ಸಾಬೀತಾದ ಹಿನ್ನೆಲೆ, ಬನ್ನಂಜೆ ರಾಜಾ ಸೇರಿ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
2013ರ ಡಿಸೆಂಬರ್ 21ರಂದು ಅಂಕೋಲಾದಲ್ಲಿ ನಡೆದ ಆರ್.ಎನ್. ನಾಯಕ್ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಬುಧವಾರ ತೀರ್ಪು ಹೊರಬಿದ್ದಿದೆ.
ಜೀವಾವಧಿ ಶಿಕ್ಷೆಗೆ ಒಳಗಾದ ನಾಲ್ವರು ಅಪರಾಧಿಗಳ ಹೆಸರು
ಎ-2 ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್
ಎ-3 ಬೆಂಗಳೂರಿನ ಅಭಿ ಬಂಡಗಾರ್
ಎ-4 ಉಡುಪಿಯ ಗಣೇಶ್ ಭಜಂತ್ರಿ
ಎ-9 ಉಡುಪಿಯ ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ ಪ್ರಕಟ
ಅಂಕೋಲಾ ಉದ್ಯಮಿ, ಬಿಜೆಪಿ ನಾಯಕ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿದ್ದರು. 2015ರ ಫೆಬ್ರವರಿ 12 ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜ ಬಂಧನವಾಗಿತ್ತು. ನಕಲಿ ಪಾಸ್ಪೋರ್ಟ್ ಹೊಂದಿದ ಆರೋಪದಡಿ ಮೊರಕ್ಕೊದಲ್ಲಿ ಬಂಧಿಸಲಾಗಿತ್ತು. ಬಳಿಕ ಭಾರತಕ್ಕೆ ಭೂಗತ ಪಾತಕಿ ಬನ್ನಂಜೆ ರಾಜ ಹಸ್ತಾಂತರಿಸಲಾಗಿತ್ತು
2015ರ ಆಗಸ್ಟ್ 14ರಂದು ಭಾರತಕ್ಕೆ ಬನ್ನಂಜೆ ರಾಜ ಕರೆತರಲಾಗಿತ್ತು. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಬೆಳಗಾವಿ ಕೋಕಾ ವಿಶೇಷ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಿದೆ. ಭೂಗತ ಪಾತಕಿ ಬನ್ನಂಜೆ ರಾಜ ಸೇರಿ ಮೂವರು ಅಪರಾಧಿಗಳ ಭವಿಷ್ಯ ಇಂದು ನಿರ್ಧಾರ ಆಗಿದೆ. ಹಿರಿಯ ವಕೀಲ ಕೆ.ಜಿ. ಪುರಾಣಿಕಮಠ ಸರ್ಕಾರದ ಪರ ವಕಾಲತ್ತು ವಹಿಸಿದ್ದರು.
ಘಟನೆ ಹಿನ್ನೆಲೆ
3 ಕೋಟಿ ರೂ. ಹಫ್ತಾ ನೀಡದಿದ್ದರೆ ಉದ್ಯಮಿ ಆರ್.ಎನ್. ನಾಯಕ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ನಾಯಕ್ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದರು. 2013ರ ಡಿಸೆಂಬರ್ 21ರಂದು ನಾಯಕ್ ಅವರನ್ನು ಉತ್ತರಪ್ರದೇಶದ ಶಾರ್ಪ್ ಶೂಟರ್ ವಿವೇಕ್ ಉಪಾಧ್ಯಾಯ ಗುಂಡಿಕ್ಕಿ ಹತ್ಯೆ ಮಾಡಿದ್ದ. ತಕ್ಷಣವೇ ಆರ್.ಎನ್. ನಾಯಕ್ ಅವರ ಗನ್ಮ್ಯಾನ್ ವಿವೇಕ್ನನ್ನು ಬೆನ್ನತ್ತಿ ಗುಂಡಿಟ್ಟು ಕೊಂದಿದ್ದರು. ಘಟನೆ ನಡೆದ ಮರುದಿನ ಕೆಲ ಮಾಧ್ಯಮಗಳಿಗೆ ಫೋನ್ ಮಾಡಿದ್ದ ಬನ್ನಂಜೆ ರಾಜಾ ತಾನೇ ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದ್ದ.
ಕೋಕಾದಡಿಯ ಮೊದಲ ಪ್ರಕರಣ
2000ನೇ ಇಸವಿಯಲ್ಲಿ ರೂಪುಗೊಂಡ ಕೋಕಾ ಕಾಯಿದೆ ರೂಪುಗೊಂಡಿತ್ತು. ಕಾಯಿದೆ ರೂಪುಗೊಂಡ ಬಳಿಕ ಬನ್ನಂಜೆ ರಾಜ ವಿರುದ್ಧವೇ ಮೊದಲ ಪ್ರಕರಣ ದಾಖಲಾಗಿತ್ತು. ಮೊರಕ್ಕೊದಲ್ಲಿ 2015ರ ಫೆಬ್ರವರಿ 12ರಂದು ಬಂಧಿತನಾಗಿದ್ದ ಬನ್ನಂಜೆ ರಾಜನನ್ನು ಭಾರತಕ್ಕೆ ಕರೆತರಲಾಗಿತ್ತು. 2015ರ ಆಗಸ್ಟ್ 14ರಂದು ಬನ್ನಂಜೆ ರಾಜಾನನ್ನು ಕರೆತಂದು ಬೆಳಗಾವಿ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸಾಕ್ಷ್ಯ ನುಡಿದಿದ್ದ ಅಣ್ಣಾಮಲೈ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ 2021ರ ಡಿಸೆಂಬರ್ 21ರಂದು ಸಾಕ್ಷ್ಯ ನುಡಿದಿದ್ದರು. ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಅವರು ಅದಕ್ಕೂ ಮುನ್ನ ನಾಯಕ್ ಕೊಲೆ ಪ್ರಕರಣದ ತನಿಖಾಧಿಕಾರಿ ಆಗಿದ್ದರು.
ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ್ ಕುಮಾರ್, ಮಾಜಿ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್ ಸೇರಿದಂತೆ ಒಟ್ಟು 210 ಮಂದಿ ಸಾಕ್ಷ್ಯ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ ಹಾಗೂ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವ ವಾದಿಸಿದ್ದರು