ಉಳ್ಳಾಲ: ಮರಳು ದಂಧೆಕೋರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನರಿಬುದ್ಧಿ ತೋರಿಸಿದ್ದ ಮರಳು ಮಾಫಿಯಾ ಗ್ಯಾಂಗ್ ಮತ್ತದೇ ಕೃತ್ಯ ಮಾಡಿದೆ. ಜಿಲ್ಲಾಡಳಿತ ನಿರ್ದೇಶನದಂತೆ ಹಾಕಿದ್ದ ಸಿಸಿಟಿವಿಯನ್ನು ಕೆಡವಲು ಯತ್ನಿಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಸೋಮೇಶ್ವರ ಮೂಡ ಲೇಔಟ್ ನಲ್ಲಿ ನಡೆದಿದ್ದು, ಈ ಕುರಿತು ಉಳ್ಳಾಲದ ಗ್ರಾಮ ಲೆಕ್ಕಾಧಿಕಾರಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
. ನಸುಕಿನ ಜಾವ 2.25 ರ ಸುಮಾರಿಗೆ KA19z 7354 ವ್ಯಾಗನಾರ್ ಕಾರಿನಲ್ಲಿ ಬಂದ ತಂಡದಲ್ಲಿ ಇದ್ದವರಲ್ಲಿ ಒಬ್ಬ ಕೆಳಗಿಳಿದು ಅಕ್ರಮ ಮರಳುಗಾರಿಕೆ ತಡೆಗಟ್ಟಲು ಹಾಕಿದ್ದ ಸಿಸಿಟಿವಿಯನ್ನು ಕೆಡವಲು ಯತ್ನಿಸಿದ್ದಾನೆ. ಕರಾವಳಿ ನಿಯಂತ್ರಣ ವಲಯ (ಸಿ ಆರ್ ಜೆಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸದಂತೆ ಜಿಲ್ಲಾಧಿಕಾರಿ, ಮರಳು ಸಮಿತಿ ಅಧ್ಯಕ್ಷರು, ಆದೇಶದಂತೆ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಗೆ ಒಂದು ವರ್ಷದವರೆಗೆ 24 ಗಂಟೆಗಳ ಕಾಲ ಸಿಸಿಟಿವಿ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಎರಡನೇ ಬಾರಿ ಮರಳು ದಂಧೆಕೋರರು ಸಿಸಿಟಿವಿ ಕೆಡವಲು ಯತ್ನಿಸಿದ್ದಾರೆ.
ಕೆಲ ತಿಂಗಳ ಹಿಂದೆ ತಂಡವೊಂದು ಸೋಮೇಶ್ವರ ಬೀಚ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಲಾರಿ ಮೂಲಕ ಗುದ್ದಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದರು. ಮರುದಿನವೇ ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.