ಉಳ್ಳಾಲ: ಮಹಿಳೆಯ ಅನುಮತಿ ಇಲ್ಲದೇ ಕಾರ್ಯಕ್ರಮದ ಫ್ಲೆಕ್ಸ್ನಲ್ಲಿ ಪೋಟೋ ಅಳವಡಿಸಿದ ಕುರಿತಾಗಿ ಕೆರಳಿದ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಉಳ್ಳಾಲದ ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವತಿಯಿಂದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ, ಅನ್ನ ಪ್ರಾಶನ, ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಸೀಮಂತ ಕಾರ್ಯಕ್ರಮವನ್ನು ಕೊಲ್ಯ ನಾರಾಯಣಗುರು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪ್ರಚಾರ ಪ್ರಯುಕ್ತ ಸಭಾಂಗಣದ ಮುಂದೆ ಅಳವಡಿಸಿದ್ದ ಫ್ಲೆಕ್ಸ್ ನಲ್ಲಿ ಹಿಂದೂ ಮಹಿಳೆಯೊಬ್ಬರ ಹಲವು ವರ್ಷಗಳ ಹಿಂದಿನ ಗರ್ಭಿಣಿಯಾಗಿದ್ದ ಭಾವಚಿತ್ರವನ್ನು ಜಾಲತಾಣದಿಂದ ನಕಲು ಮಾಡಿ ಅಳವಡಿಸಲಾಗಿದ್ದು, ಪಕ್ಕದಲ್ಲೇ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರ ಫೊಟೋ ಬಳಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಕೆರಳಿದ ಬಜರಂಗದಳದ ಕಾರ್ಯಕರ್ತರು ಇಂದು ಕಾರ್ಯಕ್ರಮ ನಡೆಯುತ್ತಿದ್ದ ನಾರಾಯಣ ಗುರು ಸಭಾಂಗಣದೊಳಗೆ ನುಗ್ಗಿ ಆಯೋಜಕರ ನಿರ್ಲಕ್ಷ್ಯತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಅಧಿಕಾರಿಗಳು ಮಾಡಿದ ಕ್ರಮ ಸಮಂಜಸವಲ್ಲ ಎಂದು ಆರೋಪಿಸಿ ಶಾಸಕ ಯು.ಟಿ. ಖಾದರ್ ಅವರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಆಯೋಜಕರು ಕಾರ್ಯಕರ್ತರ ಮನವೊಲಿಸಿ ಫ್ಲೆಕ್ಸ್ ತೆರವುಗೊಳಿಸಿದರು.