ಉಳ್ಳಾಲ: ಜಾಗಿಂಗ್ ಮುಗಿಸಿ ಮನೆಗೆ ಬಂದ ಯುವಕ ಕೋಣೆಯಲ್ಲಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಅಸೈಗೋಳಿ ಸೈಟ್ ಅಯ್ಯಪ್ಪ ಮಂದಿರದ ಬಳಿಯ ನಿವಾಸಿ ಅಭಿಲಾಷ್ ಶೆಟ್ಟಿ(36) ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಭಿಲಾಷ್ ಮೊಬೈಲನ್ನ ವಶಕ್ಕೆ ಪಡೆದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಅಭಿಲಾಷ್ ಈ ಹಿಂದೆ ಮೆಡಿಕಲ್ ರೆಫ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರು. ಹೀಗಾಗಿ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಇಂದು ಮುಂಜಾನೆ ಎಂದಿನಂತೆ ಜಾಗಿಂಗ್ ಗೆ ತೆರಳಿ ಮನೆಗೆ ಹಿಂದಿರುಗಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆ ಅಭಿಲಾಷ್ ತಾಯಿ ಮತ್ತು ಮನೆ ಮಂದಿ ಮದುವೆ ಸಮಾರಂಭಕ್ಕೆ ತೆರಳಿದ್ದು ಈ ವೇಳೆ ಅಭಿಲಾಷ್ ತನ್ನ ಕೋಣೆಯ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮದುವೆಗೆ ತೆರಳದೆ ಮನೆಯಲ್ಲೇ ಉಳಿದಿದ್ದ ಅಭಿಲಾಷ್ ತಂದೆ, ಮಗ ಕೋಣೆಯಿಂದ ಹೊರ ಬಾರದೇ ಇದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ.