- Advertisement -
- Advertisement -
ಉಳ್ಳಾಲ: ವಾಯುವಿಹಾರಕ್ಕೆಂದು ಕುಟುಂಬ ಸಮೇತರಾಗಿ ಬಂದಿದ್ದವರ ಪೈಕಿ ಮೈಸೂರು ಮೂಲದ ಮಹಿಳೆಯೊಬ್ಬರು ಸಮುದ್ರಪಾಲಾದ ಘಟನೆ ಇಂದು ಮಧ್ಯಾಹ್ನ ವೇಳೆ ಉಳ್ಳಾಲದ ಸೋಮೇಶ್ವರ ಕಡಲ ತೀರದಲ್ಲಿ ನಡೆದಿದೆ.
ಮೈಸೂರು ನಿವಾಸಿ ಭಾಗ್ಯಲಕ್ಷ್ಮಿ (45) ಮೃತರು. ಮೈಸೂರಿನಿಂದ ಮಂಗಳೂರಿಗೆ ವಿಹಾರಕ್ಕೆಂದು ಭಾಗ್ಯಲಕ್ಷ್ಮಿ ದಂಪತಿ ಹಾಗೂ ಅವರ ಮೂವರು ಪುತ್ರಿಯರು ಹಾಗೂ ಓರ್ವ ಮೊಮ್ಮಗಳು ಬಂದಿದ್ದರು.
ಪಂಪ್ವೆಲ್ ಬಳಿ ರೂಮಿನಲ್ಲಿ ತಂಗಿದ್ದ ಕುಟುಂಬ ಇಂದು ಬೆಳಿಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಪೂಜೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಉಳ್ಳಾಲದ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಕುಟುಂಬದ ಪೈಕಿ ಭಾಗ್ಯಲಕ್ಷ್ಮಿ ಅವರು ಆಯತಪ್ಪಿ ಸಮುದ್ರದ ಅಲೆಗಳ ನಡುವೆ ಸಿಲುಕಿದ್ದಾರೆ.
ತಕ್ಷಣ ಕುಟುಂಬಸ್ಥರು ಬೊಬ್ಬಿಡಲು ಆರಂಭಿಸಿದಾಗ, ಸಮೀಪದಲ್ಲಿ ಇದ್ದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ದೌಡಾಯಿಸಿ ಸಮುದ್ರಕ್ಕೆ ಹಾರಿ ಮಹಿಳೆಯನ್ನು ಮೇಲಕ್ಕೆತ್ತಿದರು. ಆದರೆ ಅದಾಗಲೇ ಅವರ ಪ್ರಾಣ ಹೋಗಿತ್ತು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -