ಪುತ್ತೂರು : ಪುತ್ತೂರಿನಲ್ಲಿ ಗ್ಯಾಸ್ ಡೆಲಿವರಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬನ್ನೂರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬನ್ನೂರು ನಿವಾಸಿ ಸೀತಾರಾಮ ರೈ (55) ಎಂಬವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಈ ಬಗ್ಗೆ ಅವರ ಪತ್ನಿ ಸವಿತಾ ರೈ ಅವರು ಪೊಲೀಸರಿಗೆ ದೂರು ನೀಡಿದ್ದು, ಸೀತಾರಾಮ ರೈ ಪುತ್ತೂರಿನಲ್ಲಿ ಗ್ಯಾಸ್ ಡೆಲಿವರಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರು. ಭಾನುವಾರ (ಎಪ್ರಿಲ್ 28) ಸಾಯಂಕಾಲ ಮನೆಯಿಂದ ಪೇಟೆಗೆಂದು ಹೋದವರು ವಾಪಸು ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿ ಮನೆಗೆ ಬಂದವರು ಮಗನೊಂದಿಗೆ ಗಲಾಟೆ ಮಾಡಿ ಬಳಿಕ ಕೋಣೆಗೆ ಮಲಗಲು ಹೋಗಿರುತ್ತಾರೆ. ಕೆಲ ಹೊತ್ತಿನ ಬಳಿಕ ಸವಿತಾರವರ ತಾಯಿ ಕೊಠಡಿಯ ಲೈಟ್ ಆಫ್ ಮಾಡಲು ಹೋದಾಗ, ಸೀತಾರಾಮರವರು ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಮಕ್ಕಳು ನೇಣು ಕುಣಿಕೆಯಿಂದ ಬಿಚ್ಚಿ ಚಿಕಿತ್ಸೆಗಾಗಿ ಪುತ್ತೂರು ಆದರ್ಶ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ . ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಯು ಡಿ ಆರ್ ನಂಬರ್ : 15-2024 ಕಲಂ:174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.