ದಾವಣಗೆರೆ: ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯರ ಅವರ ಸಹೋದರನ ಪುತ್ರ ಕಾಣೆಯಾಗಿದ್ದು, ಇದೀಗ ಚಂದ್ರಶೇಖರ್ ಪತ್ತೆಗೆ ಶೋಧ ತೀವ್ರಗೊಂಡಿದೆ.
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಸಹೋದರ ಎಂ. ಪಿ. ರಮೇಶ್ ಅವರ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿದ್ದಾನೆ. ಭಾನುವಾರದಿಂದ ನಾಪತ್ತೆ ಆಗಿದ್ದು, ಇದುವರೆಗೆ ಮನೆಗೆ ಹಿಂದಿರುಗಿ ಬಂದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಚಂದ್ರಶೇಖರ್ ಕಳೆದ ಭಾನುವಾರ ಶಿವಮೊಗ್ಗಕ್ಕೆ ವಿನಯ್ ಗುರೂಜಿ ಭೇಟಿಯಾಗಲು ತೆರಳಿದ್ದ. ವಿನಯ್ ಗುರೂಜಿ ಭೇಟಿಯಾದ ನಂತರ ಶಿವಮೊಗ್ಗದಿಂದ ಹೊನ್ನಾಳಿಗೆ ಚಂದ್ರಶೇಖರ್ ಬಂದಿದ್ದ. ಆದರೂ ಕೂಡ ಮನೆಗೆ ಹೋಗಿರಲಿಲ್ಲ. ಸ್ನೇಹಿತರ ಜೊತೆ ಇರಬಹುದು ಎಂದುಕೊಂಡಿದ್ದ ಮನೆಯವರು, ಸ್ವಲ್ಪ ಸಮಯದ ನಂತರ ಫೋನ್ ಮಾಡಿದ್ದಾರೆ. ಆಗ ಆತನ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಹೊನ್ನಾಳಿಯಲ್ಲಿನ ಸ್ನೇಹಿತರು, ಆಪ್ತರು, ಸಂಬಂಧಿಕರನ್ನು ವಿಚಾರಿಸಿದರೂ ಕೂಡ ಇನ್ನು ಚಂದ್ರಶೇಖರ್ ಪತ್ತೆಯಾಗಿಲ್ಲ.
ಹೊನ್ನಾಳಿಯಲ್ಲಿ ಚಂದ್ರಶೇಖರ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಫೋನ್ ಸ್ವಿಚ್ ಆಫ್ ಆಗಿರುವ ಬಗ್ಗೆಯೂ ಮಾಹಿತಿ ಇಲ್ಲದಂತಾಗಿದೆ. ಚಂದ್ರಶೇಖರ್ ಶಿವಮೊಗ್ಗದಿಂದ ಹೊನ್ನಾಳಿಗೆ ಬಂದರೂ ಮನೆಗೆ ಬರದೇ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರೆ. ಆತ ಎಲ್ಲಿದ್ದಾನೆ? ಏನಾಗಿರಬಹುದು ಎಂಬ ಪ್ರಶ್ನೆಗಳ ಮೇಲೆ ಪ್ರಶ್ನೆ ಎದ್ದಿವೆ. ಹೊನ್ನಾಳಿ ಪಟ್ಟಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಸಕ ಎಂ.ಪಿ. ರೇಣುಕಾಚಾರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ತೆರಳಿದ್ದಾರೆ. ಇದೀಗ ಶಾಸಕರ ತಮ್ಮನ ಮಗನ ಪತ್ತೆಗೆ ಪೊಲೀಸರು ಶೋಧಕಾರ್ಯವನ್ನು ತೀವ್ರಗೊಳಿಸಿದ್ದಾರೆ.