ಭಜನೆಯೆಂದರೆ ಭಜಿಸುವುದು; ಇತರ ಭಜಕರೊಂದಿಗೆ ದನಿಗೂಡಿಸುವುದು; ಅವರ ಭಕ್ತಿಯೊಂದಿಗೆ ನಮ್ಮ ಚಿತ್ತವನ್ನು ಒಗ್ಗೂಡಿಸುವುದು. ವೇದ ಉಪನಿಷತ್ತಿನಲ್ಲಿ ಋಷಿ ಮುನಿಗಳು ಹೇಳಿದ ವಿಚಾರಗಳು, ತತ್ವಜ್ಞಾನಗಳು ಇಲ್ಲಿ ಅತ್ಯಂತ ಸರಳವಾಗಿ ವ್ಯಕ್ತವಾಗುತ್ತವೆ.
ವೇದ – ಪುರಾಣ – ಸತ್ಸಂಗ ಗಳನ್ನು ಆ ಸ್ತರದ ವ್ಯಕ್ತಿಗಳಿಗೆ ಮಾತ್ರ ಅಧ್ಯಯನ ಮಾಡಲು ಸಾಧ್ಯವಾದರೆ, ಜನ ಸಾಮಾನ್ಯರ ಗ್ರಾಮ್ಯ ಭಾಷೆಯ ಮೂಲಕ ವೇದ ತತ್ವ ಸಾರವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಹಂಚುವ ಕಾರ್ಯ ಭಜನೆಯ ಮೂಲಕ ಸಾಧ್ಯವಾಗುತ್ತದೆ.
ಇಲ್ಲಿ ಭಗವಂತನನ್ನು ತೆಗಳಬಹುದು, ಪ್ರಶ್ನಿಸಬಹುದು, ಸ್ನೇಹಿತನಂತೆ ಪರಿಗಣಿಸಿ ಮಾತನಾಡಬಹುದು, ʼಕಳ್ಳʼ ನೆಂದು ಜರೆಯಬಹುದು, ʼನೀನ್ಯಾಕೋ ನಿನ್ನ ಹಂಗ್ಯಾಕೋʼ ಎಂದು ದೂರಬಹುದು. ಹೀಗೆ ಇಂದಿನ ಫೇಸ್ ಬುಕ್, ಟ್ವೀಟರ್ ನಂತಹ ಸಾಮಾಜಿಕ ಮಾಧ್ಯಮಗಳಂತೆ ಭಜನೆಯ ಮೂಲಕ ಸರಳವಾಗಿ ಸಾಮೂಹಿಕವಾಗಿ ವ್ಯವಹರಿಸುತ್ತಾ, ಭಗವಂತನ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾ, ಭಕ್ತಿಯ ಅಲೆಯಲ್ಲಿ ತೇಲುತ್ತಾ, ಅವನೂ ನಮ್ಮಂತೆಯೇ ಎಂದು ಪರಿಗಣಿಸಿ, ಅವನಲ್ಲಿ ಐಕ್ಯವಾಗುವ ತಾದಾತ್ಮ್ಯ ಭಾವವನ್ನು ಉದ್ದೀಪಿಸುವ ಕೆಲಸ ಭಜನೆಗಳ ಮೂಲಕ ಸಾಕಾರಗೊಳ್ಳುತ್ತವೆ.
ಆಂತರಿಕ ಮತ್ತು ಬಾಹ್ಯ ಒತ್ತಡಗಳ ಭಾರದಿಂದ ಬಳಲಿ ಬೆಂಡಾದ ಮನಗಳನ್ನು ಭಕ್ತಿಯ ಶಾಂತ ಲೋಕಕ್ಕೊಯ್ಯುವ ವರ್ಷಪೂರ್ತಿ ಜಂಜಡಗಳಲ್ಲಿ ಮುಳುಗಿದವನಿಗೆ 24 ಗಂಟೆಗಳ ನಿರಾಳತೆಯನ್ನು ಒದಗಿಸಬಲ್ಲ ಹಾಗೂ ಮತ್ತೊಂದು ಹೊಸ ವರ್ಷದಲ್ಲಿ ನವ ಚೈತನ್ಯದಿಂದ ಕರ್ತವ್ಯ ನಿರ್ವಹಿಸಲು ʼಚಾರ್ಜ್ʼ ಮಾಡಬಹುದಾದ ʼಅಖಂಡ ಭಜನಾ ಕಾರ್ಯಕ್ರಮʼ ಮತ್ತೆ ಬಂದಿದೆ.
ಪ್ರತೀ ವರ್ಷದಂತೆ ವಿಟ್ಲ ಸೀಮೆಯ ಅಳಿಕೆ ಗ್ರಾಮದ ಎರುಂಬು ಎಂಬ ಪುಟ್ಟ ಊರು ಅಖಂಡ ಭಜನಾ ಕಾರ್ಯಕ್ರಮದೊಂದಿಗೆ ಹೊಸ ವರ್ಷವನ್ನು ಎದುರುಗೊಳ್ಳುವ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಆರ್ಥಿಕವಾಗಿ ಸಾಕಷ್ಟು ಸಬಲರಿರುವ ವ್ಯವಸ್ಥಾಪನಾ ಮಂಡಳಿಯಾಗಲೀ, ವರ್ಷಪೂರ್ತಿ ಹಗಲಿರುಳೂ ದೇವಸ್ಥಾನಕ್ಕಾಗಿ ದುಡಿಯಬಲ್ಲ ಸಮಯಾವಕಾಶವಿರುವ ಭಕ್ತರಾಗಲೀ ಇಲ್ಲದಿದ್ದರೂ, ಶ್ರೀ ವಿಷ್ಣು ಮಂಗಲ ದೇವಸ್ಥಾನವನ್ನು ಕೆಲವೇ ವರ್ಷಗಳಲ್ಲಿ ನೋಡಿದವರು ಅಚ್ಚರಿಪಡುವಂತೆ ಬದಲಾಯಿಸಿದ, ಮಹಾ ವಿಷ್ಣುವಿನ ಅನುಗ್ರಹಕ್ಕಾಗಿ ಸದಾ ತುಡಿಯುವ ಭಕ್ತ ಹೃದಯಗಳು ʼಒಗ್ಗಟ್ಟಿನಲ್ಲಿ ಬಲವಿದೆʼ ಎಂದು ತೋರಿಸಿಕೊಟ್ಟಿವೆ.
ಇದೇ ಬರುವ ಡಿ.31ರ ಪೂರ್ವಾಹ್ನ 6 ರಿಂದ ಜ.1ರ ಪೂರ್ವಾಹ್ನ 6 ಗಂಟೆಯವರೆಗೆ ಅನವರತ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.