ಪುತ್ತೂರು: ರೋಟರಿ ಸಂಸ್ಥೆಯಲ್ಲಿ ಗುರುತಿಸಿಕೊಳ್ಳದೆ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವುದಲ್ಲದೆ ನೂರಾರು ಮಂದಿಗೆ ಉದ್ಯೋಗ ನೀಡಿ ಉದ್ಯೋಗದಾತರೆನೆಸಿಕೊಂಡವರಿಗೆ ರೋಟರಿ ಕ್ಲಬ್ ಪುತ್ತೂರು ಸಿಟಿ ವರ್ಷಂಪ್ರತಿ ಕೊಡಲ್ಪಡುವ ವೊಕೇಶನಲ್ ಎಕ್ಸೆಲೆನ್ಸ್ ‘ಸಮರ್ಥ’ ಪ್ರಶಸ್ತಿಗೆ ಎಸ್.ಎಲ್.ವಿ ಬುಕ್ ಹೌಸ್ ಸಂಸ್ಥೆಯ ಮಾಲಕ ದಿವಾಕರ್ ದಾಸ್ ನೆರ್ಲಾಜೆರವರು ಆಯ್ಕೆಯಾಗಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಇಲ್ಲಿನ ಸೈನಿಕ ಭವನ ರಸ್ತೆಯ ಲಯನ್ಸ್ ಸೇವಾ ಸಭಾಸದನದಲ್ಲಿ ಜರಗುವ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್ ರವರು ಡಿ.21 ರಂದು
ದಿವಾಕರ ದಾಸ್ ನೇರ್ಲಾಜೆರವರಿಗೆ ಸಮರ್ಥ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ತಂದೆ ದಿ. ರಾಮದಾಸ್ ನೇರ್ಲಾಜೆ ಕೋಲ್ಪೆ ಹಾಗೂ ತಾಯ ದಿ. ಸುಂದರಿ ರಾಮದಾಸ್ ರವರ ಪುತ್ರನಾಗಿ 1975, ಜೂನ್ ಒಂದರಂದು ಜನಿಸಿದ ದಿವಾಕರ್ ದಾಸ್ ನೆರ್ಲಾಜೆಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸೂರ್ಯ(1 ರಿಂದ 5), ದ.ಕ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ(6 ರಿಂದ 7), ಪ್ರೌಢಶಿಕ್ಷಣವನ್ನು ವಿಠಲ ಬಾಲಿಕ ಪ್ರೌಢ ಶಾಲೆ, ವಿಟ್ಲ, ಪಿಯುಸಿ ಶಿಕ್ಷಣವನ್ನು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ, ಪದವಿ ಶಿಕ್ಷಣವನ್ನು ವಿವೇಕಾನಂದ ಪದವಿ ಕಾಲೇಜು ಪುತ್ತೂರು ಇಲ್ಲಿ ಪೂರೈಸಿದ್ದರು.
ತನ್ನ ಶೈಕ್ಷಣಿಕ ಅವಧಿಯ ನಂತರ ದಿವಾಕರ್ ದಾಸ್ ರವರು ಬೆಂಗಳೂರಿನ ಹಲವು ಕಂಪೆನಿಗಳಲ್ಲಿ ದುಡಿಯುತ್ತಿದ್ದರು. ಅಂದಿನ ಕಷ್ಟದ ದಿನಗಳಲ್ಲಿ TVS ಗಾಡಿಯ ಮೂಲಕ ಉದ್ಯೋಗವನ್ನು ಪ್ರಾರಂಭಿಸಿದ ದಿವಾಕರ್ ದಾಸ್ ರವರು SLV BOOK AGENCY ಗ್ರೂಪ್ ಆಫ್ ಕಂಪೆನಿಯನ್ನು 3 ಜನರೊಂದಿಗೆ ಪ್ರಾರಂಭಿಸಿ ಇಂದು 150ಕ್ಕಿಂತಲೂ ಅಧಿಕ ಜನರಿಗೆ ಉದ್ಯೋಗ ನೀಡುವ ಮೂಲಕ ಓರ್ವ ಯಶಸ್ವಿ ಉದ್ಯಮಿಯಾಗಿದ್ದಾರೆ. ನಂತರ SLV BOOK ಹೌಸ್ ಎಂಬ ಮಳಿಗೆಯನ್ನು ಆರಂಭಿಸಿ. ಇದೀಗ ಈ ಸಂಸ್ಥೆಯು ಚಾಮರಾಜನಗರ, ಮೈಸೂರು, ಬೆಂಗಳೂರು, ಮತ್ತು ಮಂಗಳೂರಿನಲ್ಲಿ 5 ಶೋರೂಂಗಳನ್ನು ಹೊಂದಿವೆ. ಇದೀಗ SLV BOOK india pvt. ltd ಆರಂಭಿಸಿ, ವಿದ್ಯಾಭವನ್ ಎಂಬ ಪಠ್ಯಪುಸ್ತಕ ಮತ್ತು ವೈಟ್ ಸ್ಪೇಸ್ ಎಂಬ ನೋಟ್ ಪುಸ್ತಕದ ಉತ್ಪಾದನ ಘಟಕ ಆರಂಭಿಸಿರುತ್ತಾರೆ. ಇಡ್ಕಿದು ಎಂಬ ನೇರ್ಲಾಜೆ ಎಂಬ ಸಣ್ಣ ಹಳ್ಳಿಯಲ್ಲಿ ಬೆಳೆದು ಇಂದು ರಾಜ್ಯಾದ್ಯಂತ1200ಕ್ಕೂ ಅಧಿಕ ಶಿಕ್ಷಣ ಸಂಸ್ಥೆಯೊಂದಿಗೆ ತನ್ನ ಪುಸ್ತಕ ವ್ಯವಹಾರವನ್ನು ನಡೆಸುತ್ತಿದ್ದಾರೆ.
ತಾನು ಕಲಿತ ಶಾಲೆಗಳಾದ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸೂರ್ಯ, ದ.ಕ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ, ವಿಠಲ ಬಾಲಿಕ ಪ್ರೌಢ ಶಾಲೆ, ವಿಟ್ಲ, ಮತ್ತು ಬೊಳಂತಿಮೊಗರು ಪ್ರಾಥಮಿಕ ಶಾಲೆ ಸೇರಿದಂತೆ ವರ್ಷಂಪ್ರತಿ ಈ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ತಮ್ಮ ಸಂಸ್ಥೆಯಿಂದ ನೀಡುತ್ತಾ ಬಂದಿರುತ್ತಾರೆ. ಅದಲ್ಲದೆ ಕೆಲವೊಂದು ಬಡ ವಿದ್ಯಾರ್ಥಿಗಳ ಪೂರ್ತಿ ಶಿಕ್ಷಣ ವೆಚ್ಚವನ್ನು ವಹಿಸಿಕೊಂಡು ಅದೆಷ್ಟೋ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಮಾತ್ರವಲ್ಲದೆ ತಾನು ಗಳಿಸಿದ ಲಾಭಂಶದಲ್ಲಿ ಒಂದಿಷ್ಟು ಅಂಶವನ್ನು ಬಡವರಿಗೆ ನೀಡುವ ಮೂಲಕ ತಮ್ಮ ಸಮಾಜ ಸೇವೆಯನ್ನು ನಡೆಸಿಕೊó ಬಂದಿರುತ್ತಾರೆ. ಕೋರೋನಾ ಲಾಕ್ಡೌನ್ ಸಂಕಷ್ಟದಲ್ಲೂ ಇವರ ಸಂಸ್ಥೆ ಕಾರ್ಯನಿರ್ವಹಿಸದೇ ಇದ್ದಾಗಲೂ ತಮ್ಮ ಸಂಸ್ಥೆಯಲ್ಲಿ ದುಡಿಯುವ ಎಲ್ಲಾ ಸಿಬ್ಬಂದಿಗಳಿಗೂ ಪೂರ್ತಿ ವೇತನ ನೀಡುವ ಮೂಲಕ ತಮ್ಮ ಸಿಬ್ಬಂದಿಗಳ ಕಷ್ಟಕ್ಕೆ ಹೆಗಲು ನೀಡಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಇಲ್ಲಿ ನಡೆಯುವ ಗಣೇಶೋತ್ಸವದ ಸಂದರ್ಭದಲ್ಲಿ ಪ್ರತೀವರ್ಷ ಸಾರ್ವಜನಿಕ ಅನ್ನಸಂತರ್ಪಣೆಯನ್ನು ನೀಡುತ್ತಾ ಬಂದಿರುತ್ತಾರೆ. ತಾನುಕಲಿತ ಚಂದಳಿಕೆ ಶಾಲೆಗೆ ಸುಮಾರು ರೂ. 8 ಲಕ್ಷ ಮೌಲ್ಯದ ಕಟ್ಟಡ ನಿರ್ಮಾಣವನ್ನು ಇವರ ಸ್ವಂತ ಖರ್ಚಿನಲ್ಲಿ ಮಾಡಿರುತ್ತಾರೆ. ಅನೇಕ ಸಂಘ ಸಂಸ್ಥೆಗಳಿಗೆ ಮತ್ತು ದೈವ- ದೇವಸ್ಥಾನಗಳಿಗೆ ಸಹಾಯಾರ್ಥವನ್ನು ನೀಡುವ ಮೂಲಕ ಕೊಡುಗೈ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಿವಾಕರದಾಸ್ ರವರು 2004 ರಲ್ಲಿ ಹೇಮಾವತಿ ಎಂಬವರನ್ನು ವಿವಾಹವಾಗಿ ಇದೀಗ ದೀಪ್ತಿ, ದೀಕ್ಷಾ ಎಂಬ ಮಕ್ಕಳೊಂದಿಗೆ ವಾಸವಾಗಿದ್ದಾರೆ.