Saturday, April 20, 2024
spot_imgspot_img
spot_imgspot_img

ಕಡಬ: ಕಾಡಾನೆ ಸ್ಥಳಾಂತರ ಮಾಡುವ ವೇಳೆ ಪೊಲೀಸ್, ಅರಣ್ಯ ಇಲಾಖಾ ವಾಹನಗಳಿಗೆ ಕಲ್ಲು ತೂರಾಟ, ಕೊಲೆಗೆ ಯತ್ನ ಪ್ರಕರಣ; ಬಂಧಿತ 7 ಮಂದಿಗೆ ಜಾಮೀನು

- Advertisement -G L Acharya panikkar
- Advertisement -
vtv vitla

ಕಡಬ:ಕಾಡಾನೆ ಹಿಡಿದು ಸ್ಥಳಾಂತರ ಮಾಡುವ ವೇಳೆ ಗುಂಪೊಂದು ಎಲ್ಲ ಕಾಡಾನೆಗಳನ್ನೂ ಸೆರೆಹಿಡಿದು ಕೊಂಡೊಯ್ಯುವಂತೆ ಒತ್ತಾಯಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಪೊಲೀಸ್, ಅರಣ್ಯ ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದಲ್ಲದೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದ ಆರೋಪದಲ್ಲಿ ಬಂಧನವಾಗಿದ್ದ ಏಳು ಮಂದಿಗೆ ಜಿಲ್ಲಾ ನ್ಯಾಯಾಲಯ ಶರ್ತಬದ್ಧ ಜಾಮೀನು ಮಂಜೂರು ಮಾಡಿದೆ.

ಉಮೇಶ್ ಕಮರ್‌ಕಜೆ, ರಾಜೇಶ್ ಕನಡ ಕಮರ್‌ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್‌ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ ಕುಮಾರ್ ರೆಂಜಾಳ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಕೋರಿ ವಕೀಲರ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಒಂದೆಡೆ ಕಾಡಾನೆಗಳ ನಿರಂತರ ದಾಳಿ, ಅಮಾಯಕರಿಬ್ಬರನ್ನು ಬಲಿ ತೆಗೆದುಕೊಂಡ ನಂತರದ ಬೆಳವಣಿಗೆಯಲ್ಲಿ ಈ ಭಾಗದಲ್ಲಿ ಓಡಾಡುವುದೇ ಕಷ್ಟ ಎನ್ನುವ ಆತಂಕದಲ್ಲಿ ನಾಗರಿಕರು ಇರುವ ನಡುವೆಯೇ ಪೊಲೀಸರು ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗಟ್ಟಿರುವುದು ನ್ಯಾಯ ಸಮ್ಮತವಾದ ವಿಚಾರ ಅಲ್ಲ ಎಂದೂ ಆರೋಪಿಗಳ ಪರ ವಾದಿಸಿ ವಕೀಲ ಮಹೇಶ್ ಕಜೆ ಅವರು ನ್ಯಾಯಾಲಯದ ಗಮನ ಸೆಳೆದಿದ್ದರು. ಅವರ ವಾದವನ್ನು ಪುರಸ್ಕರಿಸಿದ, ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಪ್ರಭಾರವನ್ನೂ ಹೊಂದಿರುವ ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಅವರು ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಮಾ.17ರಂದು ಆದೇಶಿಸಿದ್ದಾರೆ.

ರೆಂಜಿಲಾಡಿ ನೈಲದಲ್ಲಿ ಫೆ.20ರಂದು ಬೆಳ್ಳಂಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿ ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ ಮತ್ತು ನೈಲ ರಮೇಶ್ ರೈ ಎಂಬವರು ಮೃತಪಟ್ಟಿದ್ದರು.ಆನೆ ದಾಳಿ ನಡೆಸಿ ಅಮಾಯಕರಿಬ್ಬರನ್ನು ಬಲಿ ತೆಗೆದುಕೊಂಡ ನಂತರದ ಬೆಳವಣಿಗೆಯಲ್ಲಿ ಪರಿಸರದ ನಾಗರಿಕರು ಆತಂಕದಿಂದಲೇ ದಿನ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ವಿಚಾರ ವಿಧಾನಸಭಾ ಅಧಿವೇಶದನದಲ್ಲಿಯೂ ಪ್ರಸ್ತಾಪವಾಗಿತ್ತು.

ಫೆ.23ರಂದು ರಾತ್ರಿ ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮೂಜೂರು ಅರಣ್ಯ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು.ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಕಾರ್ಯಾಚರಣಾ ತಂಡ ಮುಂದಾದಾಗ ನಾಗರಿಕರ ಗುಂಪೊಂದು ಕಾಡಾನೆಯಿದ್ದ ಲಾರಿಯನ್ನು ತಡೆಹಿಡಿದು ನಿಲ್ಲಿಸಿ, ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ ಇತರ ಕಾಡಾನೆಗಳನ್ನೂ ಸೆರೆ ಹಿಡಿದು ಒಟ್ಟಿಗೇ ಎಲ್ಲಾ ಆನೆಗಳನ್ನು ಕೊಂಡು ಹೋಗಬೇಕು ಎಂದು ಹೇಳಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದರು.

ಸೆರೆ ಹಿಡಿದ ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲವಾದ್ದರಿಂದ ನಾವು ಮೊದಲು ಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಆನೆಗಳನ್ನೂ ಸೆರೆಹಿಡಿಯವುದಾಗಿ ಅಧಿಕಾರಿಗಳು ಹೇಳಿದರೂ ಕೇಳದ ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದರು.ಪೊಲೀಸ್ ಅಧಿಕಾರಿಗಳೂ ಬಂದು ವಿಷಯ ಮನವರಿಕೆ ಮಾಡಿದರೂ ಕೇಳದೆ ಕೆಲವರು ಕರ್ತವ್ಯದಲ್ಲಿದ್ದ ಪೊಲೀಸ್, ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ ಮಾಡಿದ್ದರು.

ಇಲಾಖಾ ವಾಹನಗಳಿಗೂ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದರಲ್ಲದೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೊಲೆಗೆ ಯತ್ನಿಸಿದ್ದಾಗಿ ಉಪವಲಯ ಅರಣ್ಯಾಧಿಕಾರಿ ಮದನ್ ಬಿ.ಕೆ.ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಕಲಂ:143,144,147,148,341,353,332,307,427,504,506 ಜೊತೆಗೆ149 ಐಪಿಸಿ ಮತ್ತು ಕಲಂ: 2(©),Karnataka Prevention of Distruction&loss Of Property Act-1981ರಂತೆ ಪ್ರಕರಣ ದಾಖಲಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದರು.

- Advertisement -

Related news

error: Content is protected !!